ಪ್ರತಿಭಾ ಪಾಟೀಲ್ ಅವರ ಜಂಟಿ ಸದನದ ಭಾಷಣ
ನವದೆಹಲಿ, ಫೆ. 12 : ಭಯೋತ್ಪಾದನೆ ಕೃತ್ಯಗಳನ್ನು ನಡೆಸುವ ಮೂಲಕ ದೇಶದ ಸಾರ್ವಭೌಮತೆಗೆ ದಕ್ಕೆ ತರಲು ಉಗ್ರಗಾಮಿ ಸಂಘಟನೆಗಳು ಭಾರಿ ಯತ್ನ ನಡೆಸಿವೆ. ಇತ್ತೀಚೆಗೆ ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ನಡೆದ ಭಯೋತ್ಪಾದನಾ ದಾಳಿಗಳಿಂದ ಇದು ರುಜುವಾತಾಗಿದೆ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಕಳವಳ ವ್ಯಕ್ತಪಡಿಸಿದರು. ಭಾರತದ ಮೇಲೆ ದಾಳಿ ನಡೆಸಿ ನಿಮ್ಮ ನೆಲೆದಲ್ಲಿ ಅವಿತುಕೊಂಡಿರುವ ಭಯೋತ್ಪಾದಕರು ಹಾಗೂ ಬೆಂಬಲಿತ ಸಂಘಟನೆಗಳ ವಿರುದ್ಧ ಉಗ್ರ ಕ್ರಮಕೈಗೊಳ್ಳುವಂತೆ ಅವರು ಪಾಕಿಸ್ತಾನಕ್ಕೆ ಆಗ್ರಹಿಸಿದರು.
ಕೇಂದ್ರ ಸರ್ಕಾರದ ಕೊನೆಯ ಜಂಟಿ ಸದನಗಳ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಂಡಿರುವ ಎಲ್ಲ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಷ್ಟ್ರಪತಿಗಳು ತಮ್ಮ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರಕ್ಕೆ ಶಹಬ್ಬಾಸ್ ಗಿರಿ ನೀಡುತ್ತಾ ಹೋದರಲ್ಲದೇ, ಮುಂಬೈ ದಾಳಿಯಲ್ಲಿ ವಿದೇಶಾಂಗ ಇಲಾಖೆ ತೆಗೆದುಕೊಂಡಿರುವ ನಿರ್ಣಯಗಳು ಪ್ರಶಂಸನೀಯ ಎಂದು ಅವರು ಹೇಳಿದರು.
ದೇಶದ ಆರ್ಥಿಕತೆ ಬುಡಮೇಲು ಮಾಡಲು ಭಯೋತ್ಪಾದಕ ಸಂಘಟನೆಗಳು ವ್ಯವಸ್ಥಿತ ಸಂಚು ರೂಪಿಸಿವೆ ಎಂದು ಆರೋಪಿಸಿದ ಪ್ರತಿಭಾ ಪಾಟೀಲ್, ಈ ಮೂಲಕ ರಾಷ್ಟ್ರದ ಸಮಗ್ರತೆ ಧಕ್ಕೆ ತರಲು ಭಾರಿ ಯತ್ನ ನಡೆಸಿವೆ. ಇದಕ್ಕೆ ಭಾರತಕ್ಕೆ ಸರ್ಕಾರ ಯಾವ ಕಾರಣಕ್ಕೂ ಅವಕಾಶ ನೀಡಬಾರದು. ಈ ವರೆಗೂ ತೆಗೆದುಕೊಂಡಿರುವ ಕ್ರಮ ಉತ್ತಮವಾಗಿದ್ದೂ, ದುಷ್ಟ ಶಕ್ತಿಗಳ ನಿಗ್ರಹ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿ ಎಂದು ಕಿವಿ ಮಾತು ಹೇಳಿದರು.
ದೇಶದ ಪ್ರತಿಯೊಬ್ಬ ನಾಗರಿಕರಿಗೂ ಭದ್ರತೆ ಅವಶ್ಯ. ಅಮಾಯಕರ ಜೀವಹಾನಿಯಾಗಲು ಸರ್ಕಾರ ಬಿಡಬಾರದು ಎಂದು ಸಲಹೆ ನೀಡದ ಅವರು, ರಾಷ್ಟ್ರೀಯ ಭದ್ರತಾ ಸಂಸ್ಥೆಯನ್ನು ಜಾರಿಗೆ ತಂದಿರುವುದು ದೇಶದ ಭದ್ರತೆ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications