ಬಿಬಿಎಂಪಿ ಚುನಾವಣೆ ಮತ್ತೆ ಮುಂದಕ್ಕೆ, ಯಡಿಯೂರಪ್ಪ
ಬೆಂಗಳೂರು, ಫೆ. 10 : ಪಕ್ಷದ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸುವ ಸಕಲ ತಂತ್ರಗಳನ್ನು ಹೆಣಿಯುತ್ತಿರುವ ಬಿಜೆಪಿ ಸರ್ಕಾರಕ್ಕೆ ನ್ಯಾಯಾಲಯದ ಗಡುವಿನೊಳಗೆ ಬಿಬಿಎಂಪಿ ಚುನಾವಣೆಗಳನ್ನು ನಡೆಸದಿರಲು ನಿರ್ಧರಿಸಿದೆ. ಲೋಕಸಭೆ ಚುನಾವಣೆ ನಂತರವೇ ಬಿಬಿಎಂಪಿ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ.
ಹೀಗಂತ ಹೇಳಿದವರು ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಬಿಬಿಎಂಪಿ ಚುನಾವಣೆಯನ್ನು ಲೋಕಸಭೆ ಚುನಾವಣೆ ನಂತರ ನಡೆಸಲು ನಿರ್ಧರಿಸಲಾಗಿದೆ. ಕಾರಣವೆಂದರೆ, ಇದೇ ತಿಂಗಳು 28 ರಂದು ಸಂಸತ್ ವಿಸರ್ಜನೆಯಾಗಲಿದೆ ಎನ್ನುವುದು ಅವರು ಉತ್ತರವಾಗಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಬಿಬಿಎಂಪಿಯಲ್ಲಿ ಅಧಿಕಾರಿಗಳು ದರ್ಬಾರ್ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಗಳು ಅಧಿಕಾರ ನಡೆಸಬೇಕು ಎನ್ನುವುದು ಸಂವಿಧಾನ ಹೇಳುತ್ತಿದೆ. ಆದರೆ ಕಳೆದ ಸಮ್ಮಿಶ್ರ ಸರ್ಕಾರ ಹಾಗೂ ಇಂದಿನ ಬಿಜೆಪಿ ಸರ್ಕಾರಗಳು ಸ್ವಾರ್ಥಕ್ಕಾಗಿ ಬಿಬಿಎಂಪಿ ಚುನಾವಣೆಗಳನ್ನು ನಡೆಸದೆ ಮುಂದೂಡುತ್ತಲೇ ಎಂದು ಮಾಜಿ ಮೇಯರ್ ರಮೇಶ್ ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಾರ್ಚ್ 10ರೊಳಗೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಸ್ಪಷ್ಟ ನಿರ್ದೇಶನ ನೀಡಿತ್ತು. ಆದರೆ, ನ್ಯಾಯಾಲಯ ನೀಡಿರುವ ಗಡುವು ಸಮೀಪಿಸುತ್ತಿದ್ದರೂ ಚುನಾವಣೆ ನಡೆಸುವ ಯಾವುದೇ ಕುರುಹುಗಳು ಸರ್ಕಾರದಿಂದ ಕಾಣುತ್ತಿಲ್ಲ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಲೋಕಸಭೆ ಚುನಾವಣೆ ನಂತರವಷ್ಟೆ ಬಿಬಿಎಂಪಿ ಚುನಾವಣೆ ಎಂದು ಹೇಳಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಿಗ್ನಲ್ ರಹಿತ ರಸ್ತೆ ನಿರ್ಮಾಣ -ಯಡಿಯೂರಪ್ಪ
ಬೆಂಗಳೂರು ನಗರದಲ್ಲಿ 8 ಸಿಗ್ನಲ್ ರಹಿತ ರಸ್ತೆಗಳ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಇದಕ್ಕಾಗಿ 650 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿರುವುದಾಗಿ ಹೇಳಿದರು. ಗುಣಮಟ್ಟದ ರಸ್ತೆಗಳ ನಿರ್ಮಾಣದ ಭರವಸೆ ನೀಡಿದ ಅವರು, ಗುತ್ತಿಗೆದಾರರ ಹಣದಾಸೆಯಿಂದ ಇತ್ತೀಚೆಗೆ ನಡೆದ ರಸ್ತೆ ಕಾಮಗಾರಿಗಳ ಗುಣಮಟ್ಟ ತೀರಾ ಕಳಪೆ ಮಟ್ಟದ್ದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಎಸ್ಎಎಸ್ ತೆರಿಗೆ ಸಂಗ್ರಹ ಆರಂಭ, ಬಿಬಿಎಂಪಿ











Click it and Unblock the Notifications