ಪಾಕ್ ಮೇಲೆ ದಾಳಿಗಿಳಿದರೆ ಹುಷಾರ್, ಆಲ್ ಖೈದಾ
ನವದೆಹಲಿ. ಫೆ. 10 : ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತ-ಪಾಕ್ ದೇಶಗಳ ನಡುವೆ ಆರೋಪ-ಪ್ರತ್ಯಾರೋಪಗಳು ಮುಂದುವರೆಯುತ್ತಲೇ ಇವೆ. ಭಯೋತ್ಪಾದಕರನ್ನು ತನ್ನ ನೆಲೆದಲ್ಲಿ ಇರಿಸಿಕೊಂಡು ಸೋಗಲಾಡಿಯಂತೆ ವರ್ತಿಸುತ್ತಿರುವ ಪಾಕ್ ಕ್ರಮವನ್ನು ಅಮೆರಿಕ ಸೇರಿ ಎಲ್ಲ ರಾಷ್ಟ್ರಗಳು ಖಂಡಿಸಿವೆ.
ಇದೀಗ ಈ ಪ್ರಕರಣದಲ್ಲಿ ಅಲ್ ಖೈದಾ ಸಂಘಟನೆ ಪ್ರವೇಶ ಪಡೆದುಕೊಂಡಿದ್ದು, ಪಾಕ್ ಮೇಲೆ ದಾಳಿ ನಡೆಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದೆ. ಈ ಮೂಲಕ ಪಾಪಿ ಪಾಕಿಸ್ತಾನ ಪರೋಕ್ಷವಾಗಿ ಉಗ್ರರನ್ನು ಪೋಷಿಸುತ್ತಿರುವುದು ಸಾಬೀತಾದಂತಾಗಿದೆ.
ಅಫಘಾನಿಸ್ಥಾನದಲ್ಲಿ ವೀಡಿಯೊ ಟೇಪ್ ಬಿಡುಗಡೆ ಮಾಡಿ ಈ ಎಚ್ಚರಿಕೆ ನೀಡಿದ ಅಲ್-ಖೈದಾ ನಾಯಕ ಮುಸ್ತಫಾ -ಅಬು-ಯಾಜಿದ್ ಈ ಸಂದೇಶ ಭಾರತಕ್ಕೆ ರವಾನಿಸಿದ್ದಾನೆ. ಕಳೆದ ವರ್ಷ ನವೆಂಬರ್ ನಲ್ಲಿ ನಡೆದ ಮುಂಬೈ ದಾಳಿಯ ನಂತರ ಭಾರತದ ಸೇನಾಪಡೆ ನಗೆಪಾಟಲಿಗೆ ಗುರಿಯಾಗಿದೆ. ಇಂತಹ ಇನ್ನಷ್ಟು ಪ್ರಯೋಗ ನಮ್ಮ ಬತ್ತಳಿಕೆಯಲ್ಲಿವೆ ಎಂದು ಯಾಜಿದ್ ಎಚ್ಚರಿಕೆ ನೀಡಿದ್ದಾನೆ.
ಭಾರತವು ಪಾಕ್ ವಿರುದ್ದ ಏನಾದರೂ ಮಿಲಿಟರಿ ಕಾರ್ಯಾಚರಣೆ ನಡೆಸಿದರೆ, ಮುಂಬೈ ದಾಳಿಯ ಮಾದರಿಯಲ್ಲಿ ಇನ್ನಷ್ಟು ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾನೆ. ನಮ್ಮ ಮುಜಾಹಿದ್ದೀನ್ ಪಡೆ ನಿಮ್ಮ ಮಿಲಿಟರಿಯನ್ನು ನೆಲಕ್ಕೆ ಉರುಳಿಸುವಲ್ಲಿ ಯಶಸ್ವಿಯಾಗುತ್ತದೆ. ರಷ್ಯಾ ದೇಶದ ಮಿಲಿಟರಿಗೆ ಆದ ಪರಿಸ್ಥಿತಿಯೇ ನಿಮಗೂ ಆಗಲಿದೆ. ಆದ್ದರಿಂದ ಪಾಕಿಸ್ತಾನ ಮೇಲೆ ಸೇನಾ ಕಾರ್ಯಚರಣೆ ಮಾಡುವ ಉದ್ದೇಶವನ್ನು ಕೈಬಿಟ್ಟರೆ ಕ್ಷೇಮ ಎಂದು ವೀಡಿಯೊ ಟೇಪ್ ನಲ್ಲಿ ಯಾಜಿದ್ ಹೇಳಿಕೊಂಡಿದ್ದಾನೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications