ಭದ್ರಾ ಯೋಜನೆಗೆ ಯಡಿಯೂರಪ್ಪ ಶಂಕುಸ್ಥಾಪನೆ
ಚಿತ್ರದುರ್ಗ, ಫೆ. 9 : ಕಳೆದ ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಭದ್ರಾ ಮೇಲ್ದಂಡೆ ಯೋಜನೆಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇಂದು ಶಂಕು ಸ್ಥಾಪನೆ ನೆರವೇರಿಸುವುದರ ಮೂಲಕ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಿತು. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರನ್ನು ಕಡೆಗಣಿಸಲಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ಕಾರ್ಯಕ್ರಮವನ್ನು ಬಹಿಷ್ಕರಿಸಿ ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿದ ಪ್ರಸಂಗವೂ ನಡೆಯಿತು. ಇನ್ನೊಂದೆಡೆ ಯೋಜನೆ ವಿರೋಧಿಸಿ ತರೀಕರೆ ಬಂದ್ ಮುಂದುವರಿದಿದೆ. ಇಂದು ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ.
ನಂತರ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಚಿತ್ರದುರ್ಗದ ಜನರ ಮೂರು ದಶಕಗಳ ಕನಸು ಇಂದು ನನಸಾಗಿದೆ, ನಿಗದಿತ ಅವಧಿಯೊಳಗೆ ಯೋಜನೆಯ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಮೂರು ದಶಕಗಳಿಂದ ಇಲ್ಲಿನ ರಾಜಕಾರಣಿಗಳು ರಾಜಕೀಯ ಲಾಭಕ್ಕಾಗಿ ಯೋಜನೆಯನ್ನು ಕೈಬಿಟ್ಟಿದ್ದರು ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಕಾಲದಲ್ಲೇ ಯೋಜನೆಗೆ ಒಮ್ಮೆ ಶಂಕುಸ್ಥಾಪನೆ ಮಾಡಲಾಗಿತ್ತು. 126 ಕೋಟಿ ರುಪಾಯಿ ವೆಚ್ಚದ ಯೋಜನೆ ಸಿದ್ಧಗೊಂಡರೂ ಮೂರು ದಶಕಗಳ ಕಾಲ ಕಾರ್ಯಗತವಾಗಲಿಲ್ಲ. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾರ್ಯಗತವಾಗುವ ಹಂತಕ್ಕೆ ಬಂದಿತು. ಅಂತಿಮವಾಗಿ ಬಿಜೆಪಿ ಸರ್ಕಾರ 5,985 ಕೋಟಿ ರುಪಾಯಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಲು ತೀರ್ಮಾನಿಸಿತು. ಅಂದುಕೊಂಡಂತೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಭದ್ರಾ ಮೇಲ್ದಂಡೆ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದರು.
ಭದ್ರೆಯ ನೀರಿನ ಬಯಕೆಯಲ್ಲೇ ಬಯಲಿನ ಜನ 3 ದಶಕ ಕಳೆದಿದ್ದಾರೆ. ಆರಂಭದಲ್ಲಿ ಮೂಡಿಗೆರೆ, ನರಸಿಂಹರಾಜಪುರ, ಕೊಪ್ಪ ತಾಲ್ಲೂಕಿನ ಜನ ಮಿನಿ ಅಣೆಕಟ್ಟು ಕಟ್ಟಲು ವಿರೋಧ ವ್ಯಕ್ತಪಡಿಸಿದ್ದರಿಂದ, ನೀರಾವರಿ ತಜ್ಞ ಕೆಸಿ ರೆಡ್ಡಿ ಸಮಿತಿ ಮಿನಿ ಅಣೆಕಟ್ಟು ಪ್ರಸ್ತಾವ ಕೈಬಿಟ್ಟು ಈಗಾಗಲೇ ಇರುವ ಲಕ್ಕವಳ್ಳಿ ಮತ್ತು ಗಾಜನೂರು ಜಲಾಶಯದ ಕಾಲುವೆ ದುರಸ್ತಿ ಮಾಡಿ ಸುರಂಗದ ಮೂಲಕ ಚಿತ್ರದುರ್ಗ, ಕೋಲಾರ, ತುಮಕೂರು ಜಿಲ್ಲೆಗಳಿಗೆ ನೀರು ಹರಿಸುವ ಹೊಸ ಯೋಜನೆ ಸಿದ್ಧಪಡಿಸಿತು. ತರೀಕೆರೆ ತಾಲ್ಲೂಕಿನಲ್ಲಿ ಅಂದಾಜು 47 ಕಿಮೀ ಈ ಸುರಂಗ ಹಾದು ಹೋಗಲಿದೆ.
(ದಟ್ಸ್ ಕನ್ನಡ ವಾರ್ತೆ)
ಬರದ ನಾಡಿಗೆ ಹರಿಯಲಿದ್ದಾಳೆ ಭದ್ರೆ












Click it and Unblock the Notifications