ಬದುಕಿದ್ದಾಗಲೇ ವಾಜಪೇಯಿಗೆ ಸಂತಾಪ ಸಭೆ
ಮೈಸೂರು, ಫೆ. 9 : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ದೇಹಸ್ಥಿತಿ ಸುಧಾರಿಸುತ್ತಿರುವ ವರದಿಗಳು ಏಮ್ಸ್ ಆಸ್ಪತ್ರೆಯಿಂದ ಬರುತ್ತಿರುವುದು ಸಂಭ್ರಮದ ಸಂಗತಿ. ಆದರೆ, ಅವರು ನಿಧನರಾದರೆಂದು ತಪ್ಪಾಗಿ ಅರ್ಥೈಸಿ ಸಂತಾಪ ಸೂಚಕ ಸಭೆ ನಡೆಸಿದ ವಿಚಿತ್ರ ಘಟನೆ ಮೈಸೂರು ಜಿಲ್ಲಾಧಿಕಾರಿ ಕಛೇರಿಯಲ್ಲಿ ನಡೆದಿದೆ.
ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರು ತಮ್ಮ ಕುಂದುಕೊರತೆ ಹೇಳಿಕೊಳ್ಳಲು ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಬಂದಾಗ ಈ ಘಟನೆ ನಡೆದಿದೆ. ಮಾಜಿ ಪ್ರಧಾನಿ ವಾಜಪೇಯಿಯವರು ನಿಧನರಾಗಿದ್ದಾರೆ ಈ ಸಂದರ್ಭದಲ್ಲಿ ಯಾವುದೇ ಸಭೆ ನಡೆಸಿದರೆ ಅದು ಶಿಷ್ಟಾಚಾರ ಉಲ್ಲಂಘನೆಯಾಗುತ್ತದೆ. ಆದುದರಿಂದ ನಿಮ್ಮ ಜೊತೆಗಿನ ಸಭೆಯನ್ನು ಮುಂದಿನ ದಿನಾಂಕದವರೆಗೆ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಮಣಿವಣ್ಣನ್ ಕಬ್ಬು ಬೆಳೆಗಾರರಿಗೆ ತಿಳಿಸಿದರು ಎಂದು ಹೇಳಲಾಗಿದೆ. ಇದರಿಂದ ಗೊಂದಲಗೊಂಡ ರೈತರು ಜಿಲ್ಲಾಧಿಕಾರಿ ಕಛೇರಿಯಲ್ಲೇ ಸಂತಾಪ ಸೂಚಕ ಸಭೆ ನಡೆಸಿಯೇ ಬಿಟ್ಟರು.
ತನ್ನ ತಪ್ಪನ್ನು ಅರಿತ ಮಣಿವಣ್ಣನ್, ಕಬ್ಬು ಬೆಳೆಗಾರರು ಕಚೇರಿಯೊಳಗೆ ಆಗಮಿಸಿದಾಗ ನಾನು ದೆಹಲಿಯಿಂದ ಬಂದ ದೂರವಾಣಿ ಕರೆಯನ್ನು ಸ್ವೀಕರಿಸಿ ಮಾತನಾಡುತ್ತಿದ್ದೆ, ತಪ್ಪಾಗಿ ಅರ್ಥೈಸಿ ಸಂತಾಪ ಸೂಚಕ ಸಭೆ ನಡೆಸಲಾಗಿದೆ. ಇದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದು ಸಮಜಾಯಿಷಿ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications