ಮೈಸೂರು ನಗರದ ಐದು ಕಡೆ ಸಬ್ವೇ: ಶೋಭಾ
ಮೈಸೂರು, ಫೆ.4: ಮೈಸೂರು ನಗರದ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆಯ ಬಾಟಾ ಮುಂಭಾಗ ಸೇರಿದಂತೆ ಐದು ಕಡೆ ತಲಾ ಒಂದು ನೂರು ಲಕ್ಷ ವೆಚ್ಚದಲ್ಲಿ ಸಬ್ವೇ ನಿರ್ಮಿಸಲಿದ್ದು , ಈಗಾಗಲೇ ಟೆಂಡರ್ ಕರೆಯಲಾಗಿದೆ. 20 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯಲಿದ್ದು ನಂತರದ ಹತ್ತು ದಿನಗಳಲ್ಲಿ ಕಾಮಗಾರಿ ಮುಗಿಯುವ ಸೂಚನೆ ಇದೆ ಎಂದು ಮೈಸೂರು ಜಿಲ್ಲಾ ಉಸ್ತವಾರಿ ಸಚಿವೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಅವರು ಇಂದು ಮೈಸೂರು ನಗರದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಡನೆ ಮಾತನಾಡುತ್ತಿದ್ದರು.
ಫೆ.13 ರಂದು ಮೈಸೂರಿಗೆ ಭೇಟಿ ನೀಡಲಿರುವ ಮುಖ್ಯಮಂತ್ರಿಗಳು ಮೇಲ್ಕಂಡ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುವರು. ಸುತ್ತಮುತ್ತಲ ಪ್ರಮುಖ ಜಿಲ್ಲೆ ಪಟ್ಟಣಗಳಿಗೆ ಕೇಂದ್ರ ಬಿಂದುವಾದ ಮೈಸೂರು ಕೆ.ಆರ್. ಆಸ್ಪತ್ರೆ ನವೀಕರಣಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮೂರು ಕೋಟಿ ವೆಚ್ಚ ಮಾಡಲಾಗಿದೆ. ಅಲ್ಲದೆ ಹೊರರೋಗಿಗಳ ವಿಭಾಗ ಕೂಡ ನವೀಕರಣಗೊಂಡಿದ್ದು , ಕಂಟ್ರೋಲ್ ರೂಂ ಸುಸಜ್ಜಿತವಾಗಿದ್ದು, ಇವುಗಳನ್ನು ಮುಖ್ಯಮಂತ್ರಿಗಳು ಉಸ್ಘಾಟಿಸುವರು. ಇದಲ್ಲದೆ ಕೆ.ಆರ್. ಆಸ್ಪತ್ರೆಯಲ್ಲಿ ಕಿಡ್ನಿ ಕೇಂದ್ರ , ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಹಾಗೂ ಕ್ಯಾನ್ಸರ್ ಆಸ್ಪತ್ರೆಗಳ ಶಾಖೆ ತೆರೆಯುವ ಪ್ರಯತ್ನ ನಡೆದಿದೆ. ಬಜೆಟ್ ಅವಲಂಬಿಸಿ ಹಂತ ಹಂತವಾಗಿ ಇವುಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವೆ ಕರಂದ್ಲಾಜೆ ಹೇಳಿದರು.
ಜಿಲ್ಲೆಯಲ್ಲಿ ಖಾಸಗಿ ಬಸ್ ಮಾಲೀಕರ ಜೊತೆ ಮಾತುಕತೆ ಯಶಸ್ವಿಯಾಗಿದ್ದು ಅವರು ದರ ಇಳಿಸಲು ಒಪ್ಪಿದ್ದಾರೆ. ನರ್ಮ್ ಯೋಜನೆ 2012ಕ್ಕೆ ಪೂರ್ಣಗೊಳಿಸಬೇಕಿದೆ. ವರ್ತುಲ ರಸ್ತೆ ನಿರ್ಮಾಣ ನ್ಯಾಯಾಲಯದಲ್ಲಿದ್ದು , ತ್ವರಿತ ಇತ್ಯರ್ಥಕ್ಕೆ ಖುದ್ದಾಗಿ ಹಾಜರಾಗಿ ವಾದ ಮಂಡಿಸಲು ಅಡ್ವೋಕೇಟ್ ಜನರಲ್ ಅವರಲ್ಲಿ ಕೋರಲಾಗಿದೆ. ಪಂಚಲಿಂಗ ದರ್ಶನದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ - ಮಹದೇಶ್ವರ ಬೆಟ್ಟದ 24.3 ಕಿ.ಮೀ.ಯಿಂದ 39.4ರವರೆಗೆ, 41.3 ಕಿ.ಮೀ. ಯಿಂದ 48 ಕಿ.ಮೀ.ವರೆಗೆ ಒಟ್ಟು 22 ಕಿಲೋ ಮೀಟರ್ ರಸ್ತೆ ಕಾಮಗಾರಿ ಕೈಗೊಳ್ಳುತ್ತಿದ್ದು 20 ಕೋಟಿ ರೂ ವೆಚ್ಚ ಮಾಡಲಾಗುವುದು. ಅಲ್ಲದೆ ಮಾದಾಪುರ-ತಲಕಾಡು-ಸರಗೂರು ಟ್ಯಾಂಕ್ ಪೋಸ್ಟ್ ನಡುವಿನ 0-8 ಕಿ.ಮೀ. ರಸ್ತೆಗೆ ಕಾಮಗಾರಿ ಟೆಂಡರ್ ಕರೆಯಲಾಗಿದ್ದು, 10 ಕೋಟಿ ರೂ ವೆಚ್ಚ ಮಾಡಲಾಗುವುದು.
ಮೈಸೂರು ನಗರದಲ್ಲಿ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ನಿರ್ಮಿಸಲು 19 ಎಕರೆ ಜಮೀನು ಮಂಜೂರು ಮಾಡಲಾಗಿದೆ. ನಗರ ಬಸ್ ನಿಲ್ದಾಣವನ್ನು ದಸರಾ ವಸ್ತುಪ್ರದರ್ಶನ ಆವರಣದ ಮುಂದಿನ ಮೈದಾನಕ್ಕೆ ಎರಡು ದಿನಗಳಲ್ಲಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ನಾಗರಹೊಳೆ ಅಭಯಾರಣ್ಯದಿಂದ ಹೊರಬರಲು 10 ಗಿರಿಜನ ಕುಟುಂಬ ಮುಂದೆ ಬಂದಿವೆ. ಅವರುಗಳಿಗೆ ನೀಡುವ ಸೌಕರ್ಯಗಳನ್ನು ಆ ಹತ್ತು ಕುಟುಂಬಗಳು ವಿವರಿಸಿ ಉಳಿಕೆ 300 ಕುಟುಂಬಗಳನ್ನು ಕಾಡಿನಿಂದ ಹೊರಕ್ಕೆ ಸ್ಥಳಾಂತರಿಸಲು ಮನ:ಪರಿವರ್ತನೆಗೆ ಯತ್ನಿಸಲು ಉದ್ದೇಶಿಸಲಾಗಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸತ್ ಸದಸ್ಯ ಸಿ.ಹೆಚ್. ವಿಜಯಶಂಕರ್, ವಿಧಾನ ಪರಿಷತ್ ಸದಸ್ಯರಾದ ಸಿದ್ಧರಾಜು ಹಾಗೂ ತೋಂಟದಾರ್ಯ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)
ಫೆಬ್ರವರಿ ಅಂತ್ಯಕ್ಕೆ ರಾಜ್ಯ ಬಜೆಟ್ : ಯಡಿಯೂರಪ್ಪ












Click it and Unblock the Notifications