ಶಿವಮೊಗ್ಗದ 505 ಕೆರೆಗಳಿಗೆ ಬಂತು ಸುಯೋಗ
ಶಿವಮೊಗ್ಗ, ಜ.30: ವಿಶ್ವಬ್ಯಾಂಕ್ ನೆರವಿನೊಂದಿಗೆ ಸಮುದಾಯದ ಮೂಲಕ ಕೆರೆಗಳನ್ನು ಪುನಶ್ಚೇತನಗೊಳಿಸುವ ವಿನೂತನ ಯೋಜನೆಯನ್ನು ರಾಜ್ಯದ 9 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿದೆ. ಈ ಜಿಲ್ಲೆಗಳ 34 ತಾಲ್ಲೂಕಿನ ಹಿಂದುಳಿದ ಹಾಗೂ ಬರಪೀಡಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ 2005 ಕೆರೆಗಳನ್ನು ಅಭಿವೃದ್ಧಿ ಪಡಿಸುವ ಪ್ರಾಯೋಗಿಕ ಯೋಜನೆಯಡಿ 8 ಹೊಸ ಜಿಲ್ಲೆಗಳ 1224 ಕೆರೆಗಳನ್ನು 306.88 ಕೋಟಿ ರು.ವೆಚ್ಚ ದಲ್ಲಿ, 2012 ನೇ ಇಸವಿಯೊಳಗಾಗಿ ಸಮುದಾಯದ ಸಹಭಾಗಿತ್ವದಲ್ಲಿ ಪುಶ್ಚೇತನಗೊಳಿಸಲು ಕಾರ್ಯಯೋಜನೆ ರೂಪಿಸಲಾಗಿದೆ.
ಈ ಯೋಜನೆಯಡಿ ಜಿಲ್ಲೆಯ ಶಿವಮೊಗ್ಗ ತಾಲ್ಲೂಕಿನ 150ಕೆರೆ, ತೀರ್ಥಹಳ್ಳಿ ತಾಲ್ಲೂಕಿನ 27, ಹೊಸನಗರ 30, ಶಿಕಾರಿಪುರ 90, ಸೊರಬ 134, ಸಾಗರ ತಾಲ್ಲೂಕಿನ 74ಕೆರೆಗಳು ಸೇರಿದಂತೆ ಒಟ್ಟು 505 ಕೆರೆಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಪುನಶ್ಚೇತನಗೊಳಿಸಲು ಸಿದ್ಧತೆ ಆರಂಭವಾಗಿದೆ.
ಜಿಲ್ಲೆಯಲ್ಲಿ ಗುರುತಿಸಿರುವ 505 ಕೆರೆಗಳನ್ನು ಯೋಜನೆಯ ಉದ್ದೇಶದಂತೆ ಸಮುದಾಯದ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಅಗತ್ಯ ಮಾಹಿತಿಯೊಂದಿಗೆ ತರಬೇತಿ ನೀಡುವ 3 ದಿನಗಳ ಕಾರ್ಯಾಗಾರವನ್ನು ಗುರುವಾರನಗರದ ಮಥುರಾ ಪ್ಯಾರಡೈಸ್ನಲ್ಲಿ ಏರ್ಪಡಿಸಲಾಗಿತ್ತು. ಜಿಲ್ಲಾ ಜಲ ಸಂವರ್ಧನ ಯೋಜನಾ ಸಂಘದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಕೆ. ಹೇಮಾಜಿನಾಯಕ್ ಅವರು ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಯೋಜನೆಯ ಉದ್ದೇಶ, ರೂಪುರೇಶೆಗಳು ಹಾಗೂ ಸಮುದಾಯದ ಪಾತ್ರ ಹಾಗೂ ಜವಾಬ್ದಾರಿ ಕುರಿತಂತೆ ಮಾಹಿತಿ ನೀಡಿದರು.
ಈ ಯೋಜನೆಯ ಅನುಷ್ಠಾನಕ್ಕೆ ಈಗಾಗಲೆ 3 ಕಾರ್ಯಪಾಲಕ ಇಂಜಿನಿಯರ್ಗಳು, 7 ಸಹಾಯಕ ಕಾರ್ಯಪಾಲಕ ಇಂಜಿನಿಯರ್ಗಳು ಹಾಗೂ ಸಹಾಯಕ ಇಂಜಿನಿಯರ್ಗಳು ನೇಮಕಗೊಂಡಿದ್ದು, ಜನಸಮುದಾಯದಲ್ಲಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಿ ಕೆರೆಗಳ ಅಭಿವೃದ್ಧಿಗೆ ಮುಂದಾಗುವುದಾಗಿ ಹೇಳಿದರು. ಮುಂದಿನ ಮೂರು ವರ್ಷದೊಳಗಾಗಿ ಗುರುತಿಸಿ ರುವ 505 ಕೆರೆಗಳನ್ನು ಪುನಶ್ಚೇತನಗೊಳಿಸುವ ಉದ್ಧೇಶವಿರುವುದರಿಂದ ತುರ್ತಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗು ವುದೆಂದು ಹೇಳಿದರು.
ಈ ಯೋಜನೆಯ ಅಧೀಕ್ಷಕ ಇಂಜಿನಿಯರ್ ಚಿದಾನಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆ ಅನುಷ್ಠಾನ ಕುರಿತಂತೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ದಾವಣಗೆರೆ ಜಿಲ್ಲಾ ಜಲಸಂವರ್ಧನ ಯೋಜನಾ ಸಂಘದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಪುರುಷೋತ್ತಮ, ಉಪನಿರ್ದೇಶಕ ನಾಗರಾಜಶರ್ಮ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್, ಪಶುಪಾಲನಾ ಸಹಾಯಕ ನಿರ್ದೇಶಕ ಗೋಪಾಲಕೃಷ್ಣ ಸೇರಿದಂತೆ ಹಲವಾರು ಸಂಪನ್ಮೂಲ ಅಧಿಕಾರಿಗಳು ಪಾಲ್ಗೊಂಡಿದ್ದರು. ತರಬೇತಿ ತಜ್ಞ ಮಹದೇವಸ್ವಾಮಿ ವಂದಿಸಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:












Click it and Unblock the Notifications