ನಷ್ಟ ತುಂಬಿಕೊಡಿ : ಶಿವಸೇನೆಗೆ ಆದೇಶ
ಮುಂಬೈ, ಜ, 29 : ನಾಸಿಕ್ ಮತ್ತು ಮುಂಬೈ ನಗರದಲ್ಲಿ ತನ್ನಿಂದಾದ ಆಸ್ತಿ ಪಾಸ್ತಿಗಳ ನಷ್ಟವನ್ನು ಶಿವಸೇನೆ ಮತ್ತು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ತುಂಬಿ ಕೊಡಬೇಕು ಎಂದು ಮಹಾರಾಷ್ಟ್ರ ಸರಕಾರದ ಗೃಹ ಸಚಿವ ಜಯಂತ್ ಪಾಟೀಲ್ ಹೇಳಿದ್ದಾರೆ. ಸಾರ್ವಜನಿಕ ಸೊತ್ತುಗಳನ್ನು ಧ್ವಂಸ ಮಾಡಿದ ಮೇಲೆ ಅದರ ನಷ್ಟವನ್ನು ಭರ್ತಿ ಮಾಡುವುದು ಶಿವ ಸೇನೆಯ ಜವಾಬ್ದಾರಿ ಎಂದು ಅವರು ಗುರುವಾರ ಮಧ್ಯಾನ್ಹ ಇಲ್ಲಿ ತಿಳಿಸಿದರು.
ಮರಾಠಿ ನೌಕರರನ್ನು ಕೆಲಸದಿಂದ ವಜಾಮಾಡಿದ್ದನ್ನು ಪ್ರತಿಭಟಿಸಲು ಶಿವ ಸೇನೆ ಕಾರ್ಯಕರ್ತರು ಕಳೆದ ವಾರ ಮುಂಬೈನ ಇಂಟರ್ ಕಾಂಟಿನೆಂಟಲ್ ಗ್ರಾಂಡ್ ಹೋಟೆಲನ್ನು ಧ್ವಂಸ ಮಾಡಿದ್ದರು. ಅಲ್ಲದೆ, ಭೋಜಪುರಿ ಸಾಂಸ್ಕೃತಿಕ ಉತ್ಸವ ನಡೆಸುತ್ತಿದ್ದ ನಾಸಿಕ್ ನ ಒಂದು ಶಾಲೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಈ ಘಟನೆಗಳ ಕುರಿತು ರಾಜ್ಯ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿದೆ. ಸದ್ಯದಲ್ಲೇ ತನ್ನ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತಿದ್ದು ನ್ಯಾಯಾಲಯ ಹೊರಡಿಸುವ ನಷ್ಟ ಭರ್ತಿ ಆದೇಶವನ್ನು ಶಿವ ಸೇನೆ ಪಾಲಿಸಬೇಕಾಗುತ್ತದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಇದೇ ವೇಳೆ ರಾಜ್ಯ ಸರಕಾರವು ಪೊಲೀಸ್ ಕಾಯ್ದೆಗೆ ಒಂದು ತಿದ್ದುಪಡಿ ತರಲು ಚಿಂತಿಸುತ್ತಿದೆ. ಅದರ ಪ್ರಕಾರ, ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಮಾಡುವ ರಾಜಕೀಯ ಪಕ್ಷಗಳೂ ಸಹ ಇಂತಹ ನಷ್ಟಗಳನ್ನು ತುಂಬಿಕೊಡಬೇಕಾಗುತ್ತದೆ.
(ಒನ್ ಇಂಡಿಯ ನ್ಯೂಸ್)












Click it and Unblock the Notifications