ಹಿಂದುತ್ವ ಬಿಜೆಪಿಯ ಸ್ವತ್ತಲ್ಲ - ಎಚ್ ಡಿ ಕೆ
ಬೆಂಗಳೂರು, ಜ. 27 : ನಾನೂ ಒಬ್ಬ ಹಿಂದೂ, ನನಗೂ ಪೂಜೆ, ಪುನಸ್ಕಾರದಲ್ಲಿ ನಂಬಿಕೆ ಇದೆ, ಆದರೆ ಬೇರೆಯವರ ಭಾವನೆಗಳಿಗೆ ನೋವು ತರುವಂತಹ ಕೆಲಸಗಳನ್ನು ನಾವು ಮಾಡುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಹಿಂದೂ ಸಂಸ್ಕೃತಿ ಉಳಿಸುವ ಹೆಸರಿನಲ್ಲಿ ಬಿಜೆಪಿ ಮತ್ತು ಸಂಘ ಪರಿವಾರಗಳು ದೌರ್ಜನ್ಯ ನಡೆಸುತ್ತಿದೆ ಎಂದು ಆಪಾದಿಸಿದ್ದಾರೆ. ಹಿಂದುತ್ವ, ಹಿಂದೂ ಸಂಸ್ಕೃತಿ ಯಾರ ಮನೆಯ ಸ್ವತ್ತೂ ಅಲ್ಲ ಅಥವಾ ಸಂಘ ಪರಿವಾರಗಳು ಅದನ್ನು ಗುತ್ತಿಗೆಯನ್ನೂ ಪಡೆದುಕೊಂಡಿಲ್ಲ ಎಂದು ಹರಿಹಾಯ್ದರು.
ಮಂಗಳೂರಿನಲ್ಲಿ ನಡೆದಿರುವ ಪಬ್ ಮೇಲಿನ ದಾಳಿ ವಿಷಾದನೀಯ ಎಂದು ಜನತಾದಳ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು. ದಾಳಿಗೊಳಗಾದ ಪಬ್ ನಲ್ಲಿ ಯಾವುದೇ ಅಶ್ಲೀಲ ನೃತ್ಯ ಪ್ರದರ್ಶನ ಮಾಡುತ್ತಿದ್ದ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗಿಲ್ಲ, ಆದರೂ ಕೂಡ ಶ್ರೀರಾಮ ಸೇನೆಯ ಕಾರ್ಯಕರ್ತರು ಹಠಾತ್ ದಾಳಿ ನಡೆಸಿರುವುದು ಅನಾಗರಿಕತೆಯ ಪರಮಾವಧಿ ಜೊತೆಗೆ ತಲೆತಗ್ಗಿಸುವಂತಹದ್ದು ಕೆಲಸವಾಗಿದೆ ಎಂದು ಹೇಳಿದರು.
ಈ ವಿಷಯವನ್ನು ಅನಾವಶ್ಯಕವಾಗಿ ದೊಡ್ಡದು ಮತ್ತು ರಾಜಕೀಯ ಮಾಡಲಾಗುತ್ತಿದೆ ಎನ್ನುವ ಗ್ರಹ ಸಚಿವರ ಹೇಳಿಕೆಯನ್ನು ಖಂಡಿಸಿದ ಕುಮಾರಸ್ವಾಮಿ, ಸರಕಾರವೇ ಇಂತಹ ಘಟನೆಗಳಿಗೆ ಕುಮ್ಮುಕ್ಕು ನೀಡುತ್ತಿದೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ವ್ಯಂಗ್ಯವಾಡಿದರು.
(ದಟ್ಸ್ ಕನ್ನಡ ವಾರ್ತೆ)
ಮಂಗಳೂರು ಘಟನೆ, ಸಿಎಂ ರಾಜೀನಾಮೆಗೆ ಆಗ್ರಹ












Click it and Unblock the Notifications