ಒಗ್ಗಟ್ಟಿನಿಂದ ಭಯೋತ್ಪಾದನೆಯನ್ನು ಎದುರಿಸಿ
ನವದೆಹಲಿ, ಜ. 26 : 60 ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಏಕತೆಯಿಂದ ಹೋರಾಟ ನಡೆಸುವ ಮೂಲಕ ಭಯೋತ್ಪಾದನೆಯನ್ನು ಬೇರುಮಟ್ಟದಿಂದ ಹೊಸಕಿ ಹಾಕುವುದು ಎಲ್ಲರ ಕರ್ತವ್ಯವಾಗಿದೆ ಎಂದರು. ದೇಶದ ಪ್ರತಿಯೊಬ್ಬ ನಾಗರಿಕನೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಒತ್ತಿ ಹೇಳಿದರು.
ಭಾರತೀಯ ಸೇನಾಪಡೆ ಹಾಗೂ ಅರೆಸೇನಾಪಡೆಯ ಗೌರವವಂದನೆ ಸ್ವೀಕರಿಸಿ ಮಾತನಾಡಿದ ಅವರು, ದೇಶದ ಸಮಗ್ರತೆ ಕಾಪಾಡಲು ಇನ್ನಷ್ಟು ಭದ್ರತೆ ಒದಗಿಸಬೇಕು ಎಂದು ಅಭಿಪ್ರಾಯಪಟ್ಟರು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಡೆದ ಮುಂಬೈ ಭಯೋತ್ಪಾದನೆಯನ್ನು ತೀವ್ರ ಖಂಡಿಸಿದ ಪ್ರತಿಭಾ ಪಾಟೀಲ್, ಘಟನೆ ಪಾಕಿಸ್ತಾನದ ಕೈವಾಡವಿದ್ದರೂ ನಿರಾಕರಿಸುತ್ತಿರುವುದು ಸರಿಯಲ್ಲ. ಭಯೋತ್ಪಾದನೆಯನ್ನು ತೊಡೆದು ಹಾಕಲು ಎಲ್ಲ ರಾಷ್ಟ್ರಗಳು ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದರು.
ಮುಂಬೈ ಭಯೋತ್ಪಾದನೆ ಅಸುನೀಗಿದ ಅಧಿಕಾರಿಗಳಿಗೆ ಗೌರವ ನಮನ ಸಲ್ಲಿಸಿದ ರಾಷ್ಟ್ರಪತಿಗಳು, ಈ ಘಟನೆಯಲ್ಲಿ ಹೋರಾಡಿದ ಎಲ್ಲರನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ಭಯೋತ್ಪಾದಕರನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಸ್ಥಾಪಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಸರ್ಕಾರ ಹಾಗೂ ಪೊಲೀಸರಿಗೆ ಮಾತ್ರ ಭದ್ರತಾ ಜವಾಬ್ದಾರಿ ವಹಿಸುವುದು ಸರಿಯಲ್ಲ. ದೇಶದ ಪ್ರತಿಯೊಬ್ಬ ಮನುಷ್ಯರು ಇದಕ್ಕೆ ಕೈಜೋಡಿಸಬೇಕು ಅಂದಾಗ ಮಾತ್ರ ಇಂತಹ ದೇಶದ್ರೋಹ ಕೃತ್ಯಗಳನ್ನು ತಡೆಯಲು ಸಾಧ್ಯ ಎಂದು ಹೇಳಿದರು. ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಪಾತ್ರ ಬಹುಮುಖ್ಯವಾದದ್ದು, ಅದನ್ನು ಅರಿತು ಕೆಲಸ ಮಾಡುವಂತೆ ಮಾಧ್ಯಮಗಳಿಗೆ ಪ್ರತಿಭಾ ಪಾಟೀಲ್ ಸಲಹೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)
428 ಮಂದಿಗೆ ಶೌರ್ಯ ಪ್ರಶಸ್ತಿ ಘೋಷಣೆ
ಪದ್ಮವಿಭೂಷಣ ಇಸ್ರೊಸಿಬ್ಬಂದಿಗೆ ಅರ್ಪಣೆ: ನಾಯರ್












Click it and Unblock the Notifications