ಮಂಗಳೂರು ಘಟನೆ, ಕ್ರಮಕ್ಕೆ ಯಡಿಯೂರಪ್ಪ ಆದೇಶ
ಬೆಂಗಳೂರು, ಜ. 26 : ಮಂಗಳೂರು ಪಬ್ ವೊಂದರಲ್ಲಿ ಯವತಿಯರ ಮೇಲೆ ದಾಳಿ ನಡೆಸಿದ ಶ್ರೀರಾಮಸೇನೆ ಕಾರ್ಯಕರ್ತರ ಕ್ರಮಕ್ಕೆ ವ್ಯಾಪಕ ಟೀಕೆ, ಆರೋಪಗಳು ಕೇಳಿಬರತೊಡಗಿವೆ. ಈ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಪ್ಪಿತಸ್ಥರನ್ನು ಬಂಧಿಸಿ ಕೂಡಲೇ ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಚರ್ಚೆ ಮೇಲಿನ ದಾಳಿಗೂ ಪಬ್ ಮೇಲಿನ ದಾಳಿಗೂ ಯಾವುದೇ ಸಂಬಂಧವಿಲ್ಲ. ಕೆಲ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಸಮಾಜದ ವಾತಾವರಣ ಕೆಡಿಸುವಂಥ ಪ್ರಕರಣಗಳು ನಡೆಯುತ್ತಿದ್ದರೆ, ಅದನ್ನು ಪೊಲೀಸರ ಗಮನಕ್ಕೆ ತರಬೇಕು. ಅದು ಜವಾಬ್ದಾರಿಯುತ ನಾಗರಿಕರ ಕೆಲಸ. ಆದರೆ, ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಂಡು ಕಂಡಕಂಡವರ ಮೇಲೆ ದಾಳಿ ಮಾಡುವುದು ಸರಿಯಲ್ಲ. ಈ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಎಲ್ಲ ಅಧಿಕಾರವನ್ನು ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಮಾಜದ ಸೌಹಾರ್ದತೆಯನ್ನು ಕದಡುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುವುದು. ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಪೊಲೀಸ್ ಇಲಾಖೆ ಸಮರ್ಥವಾಗಿದೆ ಎಂದರು. ಆದರೆ, ಕೆಲವರು ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಘಟನೆ ಸಂಬಂಧಿಸಿ 18 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಕಳೆದ ಶನಿವಾರ ಮಂಗಳೂರಿನಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಪಬ್ ವೊಂದರ ಮೇಲೆ ದಾಳಿ ನಡೆಸಿ ಅಲ್ಲಿಂದ ಯವಕ-ಯವಕರ ಮೇಲೆ ಹಲ್ಲೆ ನಡೆಸಿದ್ದರು. ಘಟನೆಯನ್ನು ಶ್ರೀರಾಮಸೇನೆ ಸಮರ್ಥಿಸಿಕೊಂಡಿತ್ತು. ಕೇಂದ್ರದ ಮಹಿಳೆ ಮತ್ತು ಮಕ್ಕಳ ಖಾತೆ ಸಚಿವೆ ರೇಣುಕಾ ಚೌಧರಿ ಹಾಗೂ ಮಹಿಳಾ ಆಯೋಗಗಳು ಘಟನೆಯನ್ನು ಖಂಡಿಸಿವೆ. ಕರ್ನಾಟಕವನ್ನು ತಾಲೀಬಾನೀಕರಣ ಮಾಡಲು ಬಿಜೆಪಿ ಸರ್ಕಾರ ಸಿದ್ದತೆ ನಡೆಸಿದೆ ಎಂದು ಕೇಂದ್ರದ ಸಚಿವೆ ರೇಣುಕಾ ಚೌಧರಿ ತೀವ್ರ ವಾಗ್ದಾಳಿ ನಡೆಸಿದ್ದರು.
(ದಟ್ಸ್ ಕನ್ನಡ ವಾರ್ತೆ)
ಮಂಗಳೂರು ಘಟನೆ ಕ್ರೂರ: ಸಚಿವೆ ರೇಣುಕಾ












Click it and Unblock the Notifications