ಶನಿವಾರ ಮನಮೋಹನ್ ಸಿಂಗ್ ಏಮ್ಸ್ ಗೆ ದಾಖಲು
ನವದೆಹಲಿ, ಜ. 23 : ಹೃದಯದ ಖಾಯಿಲೆದಿಂದ ಬಳಲುತ್ತಿರುವ ಪ್ರಧಾನಮಂತ್ರಿ ಡಾ ಮನಮೋಹನ್ ಸಿಂಗ್ ಬೈಪಾಸ್ ಸರ್ಜರಿಗಾಗಿ ಶನಿವಾರ ಏಮ್ಸ್ ಆಸ್ಪತ್ರೆಗೆ ದಾಖಲಾಗಲಿದ್ದಾರೆ. ಜನವರಿ 26 ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅವರು ಗೈರುಹಾಜರಾಗುವ ಸಂಭವವಿದೆ ಎಂದು ಪ್ರಧಾನಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ. ಪ್ರಧಾನಮಂತ್ರಿ ಜವಾಬ್ದಾರಿಯನ್ನು ವಿದೇಶಾಂಗ ಸಚಿವ ಪ್ರಣಬ್ ಮಖರ್ಜಿ ಅವರಿಗೆ ವಹಿಸಲಾಗಿದೆ.
ಅಮೆರಿಕ, ಮುಂಬೈ ಹಾಗೂ ಏಮ್ಸ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಮನಮೋಹನ್ ಸಿಂಗ್ ಅವರಿಗೆ ಆಪರೇಶನ್ ಮಾಡಲಿದೆ. ಇತ್ತೀಚೆಗೆ ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಂಡು ಬಂದಿದ್ದರಿಂದ ಸ್ಥಳೀಯ ಏಮ್ಸ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿತ್ತು. ಆಗ ಹೃದಯ ಸಂಬಂಧಿ ಖಾಯಿಲೆ ಇರುವುದನ್ನು ವೈದ್ಯರು ಪತ್ತೆ ಹಚ್ಚಿದ್ದರು. ಅಲ್ಲದೇ ಶೀಘ್ರದಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವಂತೆ ಕೂಡ ಸಲಹೆ ನೀಡಿದ್ದರು ಎಂದು ಪ್ರಧಾನಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
76ರ ಹರೆಯದ ಮನಮೋಹನ್ ಸಿಂಗ್ ಕಳೆದ 30 ವರ್ಷಗಳಿಂದ ಮಧುಮೇಹ ರೋಗದಿಂದ ಬಳಲುತ್ತಿದ್ದಾರೆ. 1990 ರಲ್ಲಿ ಲಂಡನ್ ನಲ್ಲಿ ಹೃದಯದ ಬೈಪಾಸ್ ಸರ್ಜರಿ ಹಾಗೂ 2004 ರಲ್ಲಿ ದೆಹಲಿಯ ಆಸ್ಪತ್ರೆಯಲ್ಲಿ ಅಂಜಿಯೋಪ್ಲಾಸ್ಟ್ ಗೆ ಈಗಾಗಲೇ ಒಳಗಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications