ಸಿಐಡಿ ಪೊಲೀಸ್ ವಶಕ್ಕೆ ಸತ್ಯಂ ರಾಜು ಮತ್ತಿತರರು
ಹೈದರಾಬಾದ್, ಜ. 17 : ಸತ್ಯಂ ಕಂಪ್ಯೂಟರ್ಸ್ ನ ಕಳಂಕಿತ ಮಾಜಿ ಅಧ್ಯಕ್ಷ ಬಿ. ರಾಮಲಿಂಗ ರಾಜು, ಅವರ ಸಹೋದರ ರಾಮ ರಾಜು ಮತ್ತು ಮಾಜಿ ಹಣಕಾಸು ಅಧಿಕಾರಿ ವಡ್ಲಮಣಿ ಶ್ರೀನಿವಾಸ್ ಅವರನ್ನು 6ನೇ ಹೆಚ್ಚುವರಿ ದಂಡಾಧಿಕಾರಿ ನಾಲ್ಕು ದಿನಗಳ ಕಾಲ ಜನವರಿ 22ರವರೆಗೆ ಸಿಐಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಇನ್ನೂ ಹೆಚ್ಚಿನ ವಿಚಾರಣೆಯ ಅಗತ್ಯವಿರುವುದರಿಂದ ಏಳು ದಿನಗಳ ಕಸ್ಟಡಿ ನೀಡಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದ್ದರು. ಆರೋಪಿಗಳನ್ನು ಹಗಲು ಹೊತ್ತಿನಲ್ಲಿ ಮಾತ್ರ ವಿಚಾರಣೆಗೆ ಗುರಿಪಡಿಸಬೇಕು, ರಾತ್ರಿ ಹೊತ್ತಿನಲ್ಲಿ ವಿಚಾರಣೆ ನಡೆಸಬಾರದೆಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಆರೋಪಿಗಳಿಗೆ ಮೂರನೇ ದರ್ಜೆಯ ಶಿಕ್ಷೆಯನ್ನು ಕೂಡ ನೀಡಬಾರದೆಂದು ಕಟ್ಟಪ್ಪಣೆ ಮಾಡಿದ್ದಾರೆ.
8000 ಕೋಟಿ ರು. ಟೋಪಿ ಹಾಕಿರುವ ಸತ್ಯಂ ಸಂಸ್ಥಾಪಕ ರಾಮಲಿಂಗ ರಾಜು ಮತ್ತು ಅವರು ಸಹೋದರನನ್ನು ಪೊಲೀಸರು ಜನವರಿ 9ರಂದು ಬಂಧಿಸಿದ್ದರು. ಶ್ರೀನಿವಾಸ್ ಅವರನ್ನು ಜನವರಿ 10ರಂದು ಪೊಲೀಸರು ಬಂಧಿಸಿದ್ದರು. ಮೂವರನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು.
(ಏಜೆನ್ಸೀಸ್)