ಅಧಿವೇಶನ : ಹೊಸತನವಿಲ್ಲದ ರಾಜ್ಯಪಾಲ ಭಾಷಣ
ಬೆಳಗಾವಿ, ಜ. 16 : ಎರಡನೇ ಬಾರಿಗೆ ಆಯೋಜಿಸಲಾಗಿರುವ ಐತಿಹಾಸಿಕ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರ ರಾಮೇಶ್ವರ ಠಾಕೂರ್ ಸರ್ಕಾರದ ತುತ್ತೂರಿಯನ್ನು ಊದಿದ್ದಾರೆ. ಸಮೃದ್ಧ ಹಾಗೂ ಸುವರ್ಣ ಕರ್ನಾಟಕಕ್ಕೆ ಸರ್ಕಾರ ಬದ್ಧ. ಹೈದರಾಬಾದ್ ಕರ್ನಾಟಕ್ಕೆ ವಿಶೇಷ ಸ್ಥಾನಮಾನ. ಸಂವಿಧಾನದ 371 ಕಲಂ ಗೆ ತಿದ್ದುಪಡಿಗೆ ಪ್ರಯತ್ನ. ಮುಂದಿನ ದಿನಗಳಲ್ಲಿ ನಿರಂತರ ವಿದ್ಯುತ್ ನೀಡುವ ಭಾರಿ ಭರವಸೆ. ರಾಜ್ಯಕ್ಕೆ ರಾಷ್ಟ್ರೀಯ ಭದ್ರತಾ ಪಡೆಯ ಘಟಕ ಸ್ಥಾಪನೆ ಮಾಡದಿರುವ ಕೇಂದ್ರದ ಕ್ರಮಕ್ಕೆ ವಿಷಾದ. ಮುಂದಿನ ದಿನಗಳಲ್ಲಾದರೂ ನಮ್ಮ ಮೊರೆಯನ್ನು ಆಲಿಸಿ ಎನ್ನುವ ಮನವಿಗಳು ರಾಜ್ಯಪಾಲರ ಭಾಷಣದ ಪ್ರಮುಖಾಂಶಗಳಾಗಿವೆ.
ಸರ್ಕಾರ ಸಂಧ್ಯಾ ಸುರಕ್ಷೆ ಹಾಗೂ ಜನಸ್ಪಂದನ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವ ಭರವಸೆ. ರೈತರಿಗೆ ಸಾಲಮನ್ನಾ ವಿಸ್ತರಣೆ, ಬಡಕುಟುಂಬಗಳಿಗೆ ಆರೋಗ್ಯ ವಿಮೆ ಜಾರಿ. ರಾಜ್ಯದ 16 ಲಕ್ಷ ಕುಟುಂಬಗಳಿಗೆ ಈ ಯೋಜನೆ ವಿಸ್ತರಣೆ. ರಾಜ್ಯ ಪ್ರಮುಖ ನಗರಗಳಾದ ಗುಲ್ಬರ್ಗಾ, ಬಳ್ಳಾರಿ, ಬಿಜಾಪುರ ಹಾಗೂ ಶಿವಮೊಗ್ಗಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆ. ಅಂಗವಿಕಲರಿಗೆ ಮಾಸಶನ ಯೋಜನೆಯ ಹಣ ಹೆಚ್ಚಳ. ರಾಜ್ಯದ ಸುಮಾರು 5 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗವಕಾಶ. ರಾಜ್ಯದ 56 ಸಾವಿರ ಕಿಮೀ ರಸ್ತೆ ಅಭಿವೃದ್ಧಿ ಗುರಿ. ಈ ಅಭಿವೃದ್ಧಿಗೆ ವಿಶೇಷ ಕಾರ್ಯಪಡೆ ನೇಮಕ. 2009ರ ವರ್ಷವನ್ನು ಕನ್ನಡ ವರ್ಷವೆಂದು ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿ ವಿದ್ಯಾರ್ಜನೆಗೆ ಅನೇಕ ಕ್ರಮ. ಹಾಗೂ ವಿದ್ಯಾರ್ಥಿ ನಿಲಯಗಳ ನಿರ್ಮಾಣ. ಈಗಾಗಲೇ ಎಸ್ಸಿ ಎಸ್ಟಿ ವಸತಿ ನಿಲಯಗಳಲ್ಲಿ ಸುಮಾರು 17 ಸಾವಿರ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲಾಗಿದೆ. ಪ್ರಧಾನಮಂತ್ರಿ ರೋಜಗಾರ್ ಯೋಜನೆಯನ್ನು ಸಮರ್ಪಕವಾಗಿ ಬಳಿಸಿಕೊಂಡ ಎರಡನೇ ರಾಜ್ಯ ಎಂಬ ಕೀರ್ತಿಗೆ ಕರ್ನಾಟಕ ಪಾತ್ರವಾಗಿದೆ. ವಿಶೇಷವಾಗಿ ಕುಡಿಯುವ ನೀರು ಮತ್ತು ರಸ್ತೆ ಅಭಿವೃದ್ಧಿ ಹಣ ವೆಚ್ಚ ಮಾಡಲಾಗಿದೆ. ಈ ಕೆಲಸ ನಿರಂತರವಾಗಿ ಮುಂದುವರೆಯಲಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ರಾಮೇಶ್ವರ ಠಾಕೂರ್ ಸರ್ಕಾರದ ವರದಿಯನ್ನು ನಿರೂಪಿಸಿದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಮದುವಣಗಿತ್ತಿಯಂತೆ ಸಂಭ್ರಮಿಸುತ್ತಿರುವ ಬೆಳಗಾವಿ
ಉತ್ತರಕರ್ನಾಟಕದಲ್ಲಿ ಇನ್ನೊಂದು ಅಧಿವೇಶನ
ಬೆಳಗಾವಿ ಚಿತ್ರಮಂದಿರಗಳಲ್ಲಿ ಕನ್ನಡ ಕಂಪು











Click it and Unblock the Notifications