ರಾಜ್ಯಾದ್ಯಂತ ಭಯೋತ್ಪಾದನೆ ವಿರೋಧಿ ಅಭಿಯಾನ
ಗುಲಬರ್ಗಾ, ಜ. 15 : ಭಯೋತ್ಪಾದನೆ ವಿರುದ್ಧ ಜಾಗೃತಿ ಮೂಡಿಸಲು 'ಭಯೋತ್ಪಾದನೆ ಅಳಿಸಿ ದೇಶ ಉಳಿಸಿ-ಜಾಗೃತಿ ಅಭಿಯಾನ'ವನ್ನು ರಾಜ್ಯಾದ್ಯಂತ ಪ್ರತ್ಯೇಕವಾಗಿ ಹಮ್ಮಿಕೊಳ್ಳಲಾಗುತ್ತಿದ್ದು, ಗುಲಬರ್ಗಾದಲ್ಲಿ ಫೆಬ್ರವರಿ 2ರಂದು ಜಿಲ್ಲೆಯ ಎಲ್ಲಾ ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿ ಅಭಿಯಾನ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಅವರು ತಿಳಿಸಿದರು.
ಭಯೋತ್ಪಾದನೆ ಅಳಿಸಿ ದೇಶ ಉಳಿಸಿ-ವಿದ್ಯಾರ್ಥಿ ಜಾಗೃತಿ ಅಭಿಯಾನದ ರಾಜ್ಯ ಸಮಿತಿಯ ಅಧ್ಯಕ್ಷರಾಗಿರುವ ಅವರು ಗುರುವಾರ ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಸಚಿವರು, ಬೀದರ್ ನಲ್ಲಿ ಫೆಬ್ರವರಿ 3, ರಾಯಚೂರಿನಲ್ಲಿ ಫೆಬ್ರವರಿ 5 ರಂದು ಬಳ್ಳಾರಿಯಲ್ಲಿ ಫೆಬ್ರವರಿ 9 ರಂದು ಹಾಗೂ ಕೊಪ್ಪಳದಲ್ಲಿ ಫೆಬ್ರವರಿ 12ರಂದು ಜಾಗೃತಿ ಅಭಿಯಾನ ಆಚರಿಸಲು ಸಚಿವರು ದಿನಾಂಕ ನಿಗದಿಗೊಳಿಸಿದರು.
ಎಲ್ಲಾ ಧರ್ಮ, ಜಾತಿ ಬೇಧ ಭಾವಗಳನ್ನು ಮರೆತು ದೇಶ ಪ್ರೇಮದ ಭಾವನೆಯನ್ನು ಪ್ರೇರೇಪಿಸುವುದು ಇದರ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು. ಅಭಿಯಾನದ ಅಂಗವಾಗಿ ಕಾಲೇಜು ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಹಾಗೂ ವಿಭಾಗ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಸಚಿವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications