ಕಿಣೇಕರ್ ಬಂಧನ, ಹಿಂಡಲಗಾ ಬಂದ್
ಬೆಳಗಾವಿ, ಜ. 15 : ಶುಕ್ರವಾರ ನಗರದಲ್ಲಿ ನಡೆಯಲಿರುವ ವಿಧಾನಮಂಡಲದ ವಿಶೇಷ ಅಧಿವೇಶನ ಯಶಸ್ಸಿಗೆ ಭಂಗವುಂಟು ಮಾಡಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಮಹಾಮೇಳಾವ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಮಧ್ಯೆ ಅಧಿವೇಶನಕ್ಕೆ ಬಾರದಂತೆ ನೋಡಿಕೊಳ್ಳಲು ಮಾಜಿ ಶಾಸಕ ಮನೋಹರ್ ಕಿಣೇಕರ್ ಸೇರಿದಂತೆ 40ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಜನವರಿ 16 ರಂದು ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸರ್ಕಾರ ನಿರ್ಧರಿಸಿದ ದಿನದಿಂದಲೇ ಮಹಾರಾಷ್ಟ್ರ ಏಕೀಕರಣ (ಎಂಇಎಸ್) ಸಮಿತಿ ತನ್ನ ಕಾರ್ಯ ಚಟುವಟಿಕೆಯನ್ನು ಚುರುಕುಗೊಳಿಸಿತ್ತು. ಇದನ್ನು ವಿರೋಧಿಸಿ ಮಹಾಮೇಳಾವ ಕಾರ್ಯಕ್ರಮವನ್ನು ನಡೆಸಲು ಸಿದ್ದತೆ ನಡೆಸಲಾಗಿತ್ತು. ಇದನ್ನು ಗಮನಿಸಿದ ಜಿಲ್ಲಾಡಳಿತ ಮಹಾಮೇಳಾವಕ್ಕೆ ಅನುಮತಿ ನೀಡಲು ಸ್ಪಷ್ಟವಾಗಿ ನಿರಾಕರಿಸಿದೆ. ಈ ಮಧ್ಯೆ ಸರ್ಕಾರ ಅನುಮತಿ ನೀಡದಿದ್ದರೂ ಮಹಾಮೇಳಾವ ನಡೆಯಲಿದೆ ಎಂದು ಬೆಳಗಾವಿಯಲ್ಲಿರುವ ಪ್ರತಿ ಮರಾಠಿ ಭಾಷಿಕರ ಮತ ಪ್ರದರ್ಶನ ನಡೆಯುತ್ತದೆ ಎಂದು ಎಂಇಎಸ್ ನಾಯಕ ದೀಪಕ್ ನಾಯಕ ಗುಡುಗಿದ್ದಾರೆ.
ಹಿಂಡಲಗಾ ಬಂದ್
ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನಕ್ಕೆ ಅಡ್ಡಿಯುಂಟು ಮಾಡಲು ಯತ್ನಿಸುತ್ತಿರುವ ಮನೋಹರ್ ಕಿಣೇಕರ್ ಬಂಧನವನ್ನು ಖಂಡಿಸಿ ಮರಾಠಿ ಭಾಷಿಕರು ಹಿಂಡಗಲಾ ಬಂದ್ ಗೆ ಕರೆ ನೀಡಿದ್ದು. ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಮರಾಠಿ ಭಾಷಿಕರು ಕಿಣೇಕರ್ ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಉತ್ತರಕರ್ನಾಟಕದಲ್ಲಿ ಇನ್ನೊಂದು ಅಧಿವೇಶನ
ಬೆಳಗಾವಿ ಮಹಾಮೇಳಾವಕ್ಕೆ ರಾಜ್ ಠಾಕ್ರೆ












Click it and Unblock the Notifications