ಬಿಜಿಎಸ್ ಆಸ್ಪತ್ರೆಯಿಂದ ಪತ್ರಕರ್ತರಿಗೆ ವಿಮೆ
ಬೆಂಗಳೂರು, ಜ. 15 : ವರದಿಗಾರರು ಮತ್ತು ಅವರ ಕುಟುಂಬದವರಿಗೆ ಎರಡು ಲಕ್ಷ ರುಪಾಯಿ ಮೊತ್ತದ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಬಾಲಗಂಗಾಧರನಾಥ ಸ್ವಾಮೀಜಿ ಹೇಳಿದ್ದಾರೆ.
ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಸಹಯೋಗದಲ್ಲಿ ಬೆಂಗಳೂರು ವರದಿಗಾರರ ಕೂಟ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಆರೋಗ್ಯ ವಿಮೆಗೆ ತಗಲುವ ವೆಚ್ಚವನ್ನು ಶ್ರೀಮಠವೇ ಭರಸಲಿದೆ ಎಂದರು. ವರದಿಗಾರರು ಸದಾ ಒತ್ತಡದ ನಡುವೆ ಕೆಲಸ ಮಾಡುವುದರಿಂದ ಆರೋಗ್ಯ ವಿಮೆಯ ಅವಶ್ಯಕತೆ ಇದೆ. ಉದ್ದೇಶಿತ ವಿಮೆ ಸೌಲಭ್ಯವನ್ನು ಬಿಜಿಎಸ್ ಆಸ್ಪತ್ರೆಯಲ್ಲಿದೆ ಹಾಗೂ ಅತ್ಯಾಧುನಿಕ ಸೌಲಭ್ಯ ಇರುವ ಯಾವುದೇ ಆಸ್ರತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಗ್ರಾಮೀಣ ಜನರಿಗಾಗಿ ಒಂದು ಸಾವಿರ ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆ ಮತ್ತು ಕಾಲೇಜು ಹಾಗೂ ನಗರ ಕೆಂಗೇರಿ ಬಳಿ ಸುಸಜ್ಜಿತ, ಅತ್ಯಾಧುನಿಕ ಸೌಲಭ್ಯವುಳ್ಳ ಬಿಜೆಎಸ್ ಆಸ್ಪತ್ರೆ ಕಟ್ಟಲಾಗಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಶ್ರೀಗಳು ಹೇಳಿದರು.(ದಟ್ಸ್ ಕನ್ನಡ ವಾರ್ತೆ)