ಚಂಬಲ್ ಸಂಸ್ಕೃತಿಯ ತ್ರಿವಳಿ ಸಚಿವರು
ಬಳ್ಳಾರಿ, ಜ. 13 : ಚಂಬಲ್ ಕಣಿವೆಯ ಡಕಾಯಿತಿ ಸಂಸ್ಕೃತಿಯ ತ್ರಿವಳಿ ಸಚಿವರು ರಾಜ್ಯದ ಗಣಿ ಸಂಪತ್ತನ್ನು ಕೊಳ್ಳೆ ಹೊಡೆದಿದ್ದಾರೆ. ಧೈರ್ಯವಿದ್ದರೆ ಗಣಿ ಸೀಡಿಯನ್ನು ಬಹಿರಂಗಗೊಳಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಪ್ರವಾಸೋದ್ಯಮ ಸಚಿವ ಜನಾರ್ದನರೆಡ್ಡಿ ಅವರಿಗೆ ನೇರ ಸವಾಲು ಎಸೆದಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ನಂತರ ಪ್ರಥಮ ಬಾರಿಗೆ ಬಳ್ಳಾರಿಗೆ ಆಗಮಿಸಿದ ಅವರು, ಸಚಿವರಾದ ಜನಾರ್ದನರೆಡ್ಡಿ, ಕರುಣಾಕರರೆಡ್ಡಿ ಹಾಗೂ ಶ್ರೀರಾಮುಲು ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಳ್ಳಾರಿ ಗಣಿ ಧಣಿಗಳ ದರ್ಬಾರಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ಇವರ ಸರ್ವಾಧಿಕಾರಿ ಧೋರಣೆಯಿಂದ ಅಧಿಕಾರಿಗಳು ತಮ್ಮ ಕೆಲಸಕಾರ್ಯಗಳನ್ನು ನೆಟ್ಟಗೆ ಮಾಡದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ, ವಿಶೇಷವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿಭಟನೆಗಳು, ಚಳವಳಿಗಳು ನಡೆಯದ ವಾತಾವರಣವನ್ನು ತ್ರಿವಳಿ ಸಚಿವರು ನಿರ್ಮಿಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಜನಾರ್ದನರೆಡ್ಡಿ ಅವರ ಮಾಲೀಕತ್ವದ ಓಬಳಾಪುರಂ ಮೈನಿಂಗ್ ಕಂಪನಿ ರಾಜ್ಯದ ಗಣಿ ಸಂಪತ್ತನ್ನು ಸಂಪೂರ್ಣವಾಗಿ ಲೂಟಿ ಮಾಡಿದೆ. ಆದರೂ ಕೂಡಾ ತಪ್ಪನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂದ ಕುಮಾರಸ್ವಾಮಿ ಕಿಡಿಕಾರಿದರು. ತಾಕತ್ತಿದ್ದರೆ ರೆಡ್ಡಿ ತಮ್ಮ ಕಿಸೆಯಲ್ಲಿರುವ ಗಣಿ ಸೀಡಿಗಳನ್ನು ಹೊರತರಲಿ. ಇದರಿಂದ ಸತ್ಯಾಸತ್ಯತೆ ಹೊರಬರಲಿದೆ ಎಂದು ಅವರು ಆಗ್ರಹಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಗಣಿ ಲೂಟಿ, ಸೊರಬದ ಜನವಿರೋಧಿ ದಂಡಾವತಿ ನೀರಾವರಿ ಯೋಜನೆ ಕುರಿತು ಚರ್ಚೆ ನಡೆಸಲಾಗುವುದು. ಸರ್ಕಾರ ಇದಕ್ಕೆ ಅವಕಾಶ ನೀಡದಿದ್ದರೆ ಅಧಿವೇಶನ ಬಹಿಷ್ಕರಿಸಲಾಗುವುದು ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು. ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೋತ್ತರ ಹಾಗೂ ಶೂನ್ಯ ವೇಳೆ ರದ್ದುಪಡಿಸಿರುವ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕುಮಾರಸ್ವಾಮಿ, ಚರ್ಚೆಗೆ ಅವಕಾಶ ನೀಡದಿದ್ದರೆ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಮತ್ತೊಂದು ಎಚ್ಚರಿಕೆ ಮಾತು ಆಡಿದರು.
(ದಟ್ಸ್ ಕನ್ನಡ ವಾರ್ತೆ)