ಮುಂಬೈ ಸ್ಫೋಟ ಕೇಸ್ ಗೆ ವಿಶೇಷ ನ್ಯಾಯಪೀಠ
ಮುಂಬೈ, ಜ. 13 : ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸಿಬಿಐ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಎಂ ಎಲ್ ತೆಹಿಲಿಯಾನಿ ನೇತೃತ್ವದ ವಿಶೇಷ ನ್ಯಾಯಪೀಠವನ್ನು ಮಹಾರಾಷ್ಟ್ರ ಸರ್ಕಾರ ರಚಿಸಿದೆ.
ಕಳೆದ ನವೆಂಬರ್ 26 ರಂದು ಲಷ್ಕರ್ ಇ ತೊಯ್ಬಾ ಬೆಂಬಲಿತ ಪಾಕಿಸ್ತಾನದ ಮೂಲದ ಉಗ್ರರು ಮುಂಬೈನಲ್ಲಿ ಭಯೋತ್ಪಾದನೆ ಕೃತ್ಯ ನಡೆಸಿದ್ದರು. ಈ ಭಯಾನಕ ಕೃತ್ಯದಲ್ಲಿ 180ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದರು. 10 ಮಂದಿ ಉಗ್ರರ ತಂಡ ಕರಾಚಿಯಿಂದ ಸಮುದ್ರದ ಮೂಲಕ ಮುಂಬೈಗೆ ಬಂದಿಳಿದು ಭಾರಿ ಅನಾಹುತವನ್ನು ನಡೆಸಿತ್ತು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ರಾಷ್ಟ್ರೀಯ ಭದ್ರತಾ ಪಡೆಯ ವೀರರು ನಡೆಸಿದ ಗುಂಡಿನ ಕಾಳಗದಲ್ಲಿ ಪಾಕಿಸ್ತಾನದ ಫರೀದಕೋಟ್ ಗ್ರಾಮ ಅಜ್ಮಲ್ ಅಮೀರ್ ಕಸಬ್ ಎಂಬ ಏಕೈಕ ಉಗ್ರ ಸಿಕ್ಕಿಬಿದ್ದಿದ್ದ. ಆದರೆ, ಭಾರತಕ್ಕೆ ಅದು ಕರಾಳ ದಿನವೆಂದೇ ಹೇಳಬಹುದು. ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಎನ್ ಕೌಂಟರ್ ತಜ್ಞ ವಿಜಯ ಸಲಸ್ಕರ್, ಡಿಸಿಪಿ ಅಶೋಕ್ ಕಾಮ್ಟೆ ಹಾಗೂ ಎನ್ಎಸ್ ಜಿ ಮೇಜರ್ ಬೆಂಗಳೂರು ಮೂಲದ ಸಂದೀಪ ಉನ್ನಿಕೃಷ್ಣನ್ ವೀರಮರಣ ಅಪ್ಪಿದರು.
ಪಾಕಿಸ್ತಾನದ ಉಗ್ರ ಕಸಬ್ ವಿರುದ್ಧ ಒಟ್ಟು 12 ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಮುಂಬೈ ಪೊಲೀಸ್ ಆಯುಕ್ತ ಹಸನ್ ಗಫೂರ್ ತಿಳಿಸಿದ್ದಾರೆ. ನ್ಯಾಯಮೂರ್ತಿ ತೆಹಿಲಿಯಾನಿ ಅವರು ಸದ್ಯ ಮುಂಬೈ ಹೈಕೋರ್ಟ್ ನ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1993 ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟ ಪ್ರಕರಣವನ್ನು ಸರ್ಕಾರದ ಪರ ವಕಾಲತ್ತು ನಡೆಸಿದ್ದ ಉಜ್ವಲ್ ನಿಕ್ಕಂ ಅವರು ಮುಂಬೈ ಭಯೋತ್ಪಾದನೆಯ ಪ್ರಕರಣದ ವಿಚಾರಣೆ ನಡೆಸಲು ನೇಮಕ ಮಾಡಲಾಗಿದೆ ಎಂದು ಗಫೂರ್ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಉಗ್ರರನ್ನು ಹಸ್ತಾಂತರಿಸುವುದಿಲ್ಲ ; ಪಾಕ್











Click it and Unblock the Notifications