ನಾನು ಬಲಿಪಶು ಆಗಿದ್ದೇನೆ : ದುರಾನಿ
ಇಸ್ಲಾಮಾಬಾದ್, ಜ. 13 : ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ನನ್ನ ಜವಾಬ್ದಾರಿಗೆ ತಕ್ಕಂತೆ ನಾನು ನಡೆದುಕೊಂಡಿರುವೆ. ಆದರೆ ಸರ್ಕಾರ ನನ್ನನ್ನು ವಿನಾಕಾರಣ ಬಲಿಪಶು ಮಾಡಿತು ಎಂದು ಅಮಾನತುಗೊಂಡಿರುವ ಪಾಕಿಸ್ತಾನ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೆಹಮೂದ್ ಅಲಿ ದುರಾನಿ ಆರೋಪಿಸಿದರು.
ಪಾಕಿಸ್ತಾನದ ಜಿಯೋ ಟಿವಿಗೆ ನೀಡಿದ ಸಂದರ್ಶನದಲ್ಲಿ ದುರಾನಿ ಪಾಕ್ ಸರ್ಕಾರದ ವಿರುದ್ಧ ಅನೇಕ ಆರೋಪ ಮಾಡಿದರು. ಮುಖ್ಯವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿದ್ದ ನಾನು ಪ್ರಧಾನಮಂತ್ರಿ ನೀಡಿದ ಸೂಚನೆ ಮೇರೆಗೆ ನನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಮುಂಬೈ ಭಯೋತ್ಪಾದನೆ ಬಗ್ಗೆ ಪ್ರಧಾನಮಂತ್ರಿ ಕಚೇರಿಯಿಂದ ಅಧಿಕೃತವಾಗಿ ಪರವಾನಿಗಿ ಪಡೆದು ನಾನು ಆ ಹೇಳಿಕೆಯನ್ನು ನೀಡಿದ್ದೇನೆ ಎಂದು ದುರಾನಿ ಸ್ಪಷ್ಟಪಡಿಸಿದ್ದಾರೆ.
ಇಷ್ಟಾದರೂ ಕೂಡ ಪ್ರಧಾನಮಂತ್ರಿ ಯಾಸೆಫ್ ರಾಜಾ ಗಿಲಾನಿ ನನ್ನನ್ನು ಯಾವ ಕಾರಣಕ್ಕೆ ಅಮಾನತು ಮಾಡಿದರೆಂದು ದುರಾನಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸತ್ಯಾಸತ್ಯತೆ ಜನತೆಗೆ ತಿಳಿಯಲು ಕೂಡಲೇ ಸರ್ಕಾರ ಈ ಬಗ್ಗೆ ಕಾರಣವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಮುಂಬೈ ಭಯೋತ್ಪಾದನೆ ನಂತರ ಆ ಘಟನೆಯಲ್ಲಿ ಪಾಕಿಗಳ ಕೈವಾಡವಿರುವುದನ್ನು ಪಾಕ್ ಸರ್ಕಾರ ನಿರಾಕರಿಸುತ್ತಲೇ ಬಂದಿತ್ತು. ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಮೆಹಮೂದ್ ಅಲಿ ದುರಾನಿ ಅವರು ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಕಸಬ್ ಪಾಕಿಸ್ತಾನದವನು ಎಂದು ಹೇಳಿಕೆ ನೀಡಿ ತೀವ್ರ ಕುತೂಹಲ ಸೃಷ್ಟಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications