ಶಂಕರಲಿಂಗೇಗೌಡರಿಗೆ ಜೀವ ಬೆದರಿಕೆ ಕರೆ
ಮೈಸೂರು, ಜ. 12 : ಆಡಳಿತರೂಢ ಬಿಜೆಪಿ ಪಕ್ಷದ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಹಿರಿಯ ಮುಖಂಡ ಎಚ್ ಎಸ್ ಶಂಕರಲಿಂಗೇಗೌಡ ಅವರಿಗೆ ಕಳೆದ ವಿಧಾನಸಭೆ ನಂತರ ನಿರಂತರವಾಗಿ ಕೊಲೆ ಬೆದರಿಕೆಗಳು ಬರತೊಡಗಿವೆ. ಕಳೆದ ಮೂರು ತಿಂಗಳಿಂದ ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರೊಬ್ಬರು ನಿತ್ಯ ಜಾಗರಣೆ ಮಾಡುತ್ತಿರುವ ಅಪರೂಪ ಪ್ರಸಂಗ ನಡೆದಿದೆ.
ಈ ವಿಷಯವನ್ನು ಸ್ವತಃ ಶಂಕರಲಿಂಗೇಗೌಡರು ಬಹಿರಂಗಪಡಿಸಿದ್ದಾರೆ. ಮೈಸೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದರೆ ಕ್ರಮಕೈಗೊಳ್ಳುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಗೌಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೊಲೆ ಬೆದರಿಕೆ ಕಾಟದಿಂದ ಸಾಕಾಗಿ ಹೋಗಿದೆ ಎಂದು ಶಂಕರಲಿಂಗೇಗೌಡ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಜನಪ್ರತಿನಿಧಿಯೊಬ್ಬರಿಗೆ ಜೀವ ಬೆದರಿಕೆ ಕರೆ ಬಂದ ನಂತರ ದೂರು ನೀಡಿದರೂ ಈ ವರೆಗೂ ಮೈಸೂರು ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ. ನಿರ್ಲಕ್ಷ್ಯದ ಜೊತೆಗೆ ಮೈಸೂರು ಪೊಲೀಸ್ ಆಯುಕ್ತ ಪರಶಿವಮೂರ್ತಿ ಅವರು ಬರೀ ಉಡಾಫೆಯ ಮಾತುಗಳನ್ನಾಡುತ್ತಾರೆ. ಈ ಮೂಲಕ ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಶಂಕರಲಿಂಗೇಗೌಡ ಆರೋಪಿಸಿದರು.
ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನಾನು ಬಿಜೆಪಿ ಪಕ್ಷದ ಹಿರಿಯ ಮುಖಂಡ. ಕಳೆದ ವಿಧಾನಸಭೆ ಚುನಾವಣೆಯ ನಂತರ ಇಂತಹ ಬೆದರಿಕೆ ಕರೆಗಳು ನಿರಂತರವಾಗಿ ಬರತೊಡಗಿವೆ. ಭಾನುವಾರ ರಾತ್ರಿ ಸುಮಾರು 10.15ಕ್ಕೆ ಚೆನ್ನೈ ನಗರದ ಟಿ ನಗರದಿಂದ ಕೊಲೆ ಬೆದರಿಕೆ ಕರೆ ಬಂದಿದೆ. ಹಾಗೂ ಅವಾಚ್ಯವಾಗಿ ನಿಂದಿಸಲಾಗುತ್ತಿದೆ. ಜೀವ ಬೆದರಿಕೆ ಇರುವ ನನಗೆ ಸೂಕ್ತ ರಕ್ಷಣೆ ನೀಡುವಲ್ಲಿ ಮೈಸೂರು ಪೊಲೀಸರು ವಿಫಲರಾಗಿದ್ದಾರೆ ಎಂದು ಶಂಕರಲಿಂಗೇಗೌಡ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)