ನಂದಿ ವಿಗ್ರಹ ಭಗ್ನ;ಕೊಪ್ಪಳ ಉದ್ವಿಗ್ನ
ಕೊಪ್ಪಳ, ಜ. 12 : ಗೌರಿ ಅಂಗಳ ಪ್ರದೇಶದ ಬೆನಕನ ದೇವಸ್ಥಾನದ ಮೇಲಿನ ನಂದಿ ವಿಗ್ರಹಗಳನ್ನು ಶನಿವಾರ ರಾತ್ರಿ ದುಷ್ಕರ್ಮಿಗಳ ಭಗ್ನಗೊಳಿಸಿದ್ದು, ಕೊಪ್ಪಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಗವಿಸಿದ್ದೇಶ್ವರ ಜಾತ್ರೆ ನಡೆಯಲಿರುವ ಈ ಸಂದರ್ಭದಲ್ಲಿ ಕಳಂಕ ತರಲು ದುಷ್ಕರ್ಮಿಗಳು ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂಬ ವದಂತಿ ಹರಡಿದೆ.
ದುಷ್ಕರ್ಮಿಗಳು ಭಗವಾಧ್ವಜವನ್ನು ಧ್ವಂಸಗೊಳಿಸಲು ಯತ್ನಿಸಿದ್ದಾರೆ. ದೇವಸ್ಥಾನದ ಆವರಣದಲ್ಲಿ ಪಾದರಕ್ಷೆಗಳನ್ನೂ ಎಸೆದಿದ್ದಾರೆ. ಎಸ್ ಪಿ ಈಶ್ವರಚಂದ್ರ ವಿದ್ಯಾಸಾಗರ, ಡಿವೈಎಸ್ಪಿ ಡಿಎಲ್ ಹಣಗಿ, ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಕರಣವನ್ನು ಖಂಡಿಸಿರುವ ನಾನಾ ಹಿಂದೂಪರ ಸಂಘಟನೆಗಳು, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿವೆ. ಕುಷ್ಟಗಿ, ಯಲಬುರ್ಗಾ, ಗಂಗಾವತಿ ಮತ್ತು ಕನಕಗಿರಿಯಲ್ಲಿ ಬಿಜೆಪಿ ಜನವರಿ 12 ರಂದು ಬಂದ್ ಗೆ ಕರೆ ನೀಡಿದೆ.
ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗುವುದು. ನಾಗರಿಕರು ಶಾಂತಿ ಕಾಪಾಡುವಂತೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕೋರಿದ್ದಾರೆ. ಹಿಂದೂಪರ ಸಂಘಟನೆಗಳು ಇಂತಹ ಘಟನೆಗಳನ್ನು ಸಹಿಸವು. ಸರ್ಕಾರ ಎಚ್ಚೆತ್ತು ಆರೋಪಿಗಳನ್ನು ಬಂಧಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಫಕೀರಪ್ಪ ಅರೇರ್ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)