ಹೈಕೋರ್ಟ್ ಜಡ್ಜ್ ಗೆ ನೈಸ್ ಪುಸ್ತಕ ಕೊಟ್ಟ ಗೌಡ್ರು
ಬೆಂಗಳೂರು, ಜ. 12 : ನೈಸ್ ಹಗರಣಕ್ಕೆ ಸಂಬಂಧಿಸಿದಂತೆ ಹೊರತಂದಿದ್ದ ಪುಸ್ತಕವನ್ನು ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ ರವಾನಿಸಿದ್ದ ಜೆಡಿಎಸ್ ವರಿಷ್ಠ ದೇವೇಗೌಡ ಕ್ರಮದ ಬಗ್ಗೆ ಹೈಕೋರ್ಟ್ ದಿಗ್ಭ್ರಮೆ ವ್ಯಕ್ತಪಡಿಸಿದೆ. ಫೆಬ್ರವರಿ ಮೊದಲ ವಾರದಲ್ಲಿ ಖುದ್ದಾಗಿ ನ್ಯಾಯಾಲಯ ಹಾಜರಾಗಿ ಈ ಕುರಿತು ಸ್ಪಷ್ಟವಾದ ವಿವರಣೆ ನೀಡುವಂತೆ ಹೈಕೋರ್ಟ್ ದೇವೇಗೌಡರಿಗೆ ನೋಟಿಸ್ ನೀಡಿದೆ.
ಇದರ ಜೊತೆಗೆ ನೈಸ್ ಹಗರಣ ಕುರಿತಾದ ಪುಸ್ತಕವನ್ನು ನ್ಯಾಯಾಲಯವು ಸ್ವಯಂ ಪ್ರೇರಣೆಯಿಂದ ಸಾರ್ವಜನಿಕ ಮೊಕದ್ದಮೆ ಎಂದು ಪರಿಗಣಿಸಿದೆ ಎಂದು ಪತ್ರದಲ್ಲಿ ಹೇಳಿದೆ. ಆದರೆ, ನೈಸ್ ಸಂಸ್ಥೆ ವಿರುದ್ಧ ಸುಪ್ರಿಕೋರ್ಟ್ ನಲ್ಲಿ ಇನ್ನೂ ವಿಚಾರಣೆ ಮುಂದುವರಿದಿದೆ. ಇಂತಹ ಸಮಯದಲ್ಲಿ ಹೈಕೋರ್ಟ್ ಮಧ್ಯ ಪ್ರವೇಶ ಮಾಡುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯದ ಮುಂದೆ ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ಬಗ್ಗೆ ಯಾರೂ ಕೂಡ ಸಾರ್ವಜನಿಕವಾಗಿ ಇಲ್ಲವೇ ಪತ್ರಿಕಾಗೋಷ್ಠಿ ಮೂಲಕ ಹೇಳಿಕೆಯನ್ನು ನೀಡುವಂತಿಲ್ಲ. ಆದರೆ, ದೇವೇಗೌಡರು ನೈಸ್ ಹಗರಣವನ್ನು ಪುಸ್ತಕ ರೂಪದಲ್ಲಿ ಹೊರತಂದು ನ್ಯಾಯಾಮೂರ್ತಿಗಳಿಗೆ ರವಾನಿಸಿರುವುದು ಕಾರಣವಾದರೂ ಏನು ಎಂದು ಹೈಕೋರ್ಟ್ ಪ್ರಶ್ನಿಸಿದೆ. ಅದ್ದರಿಂದ ಖುದ್ದಾಗಿ ಇಲ್ಲ ಅವರ ಪರ ಇರುವ ವಕೀಲರು ಫೆಬ್ರವರಿ ಮೊದಲ ವಾರದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.
ಕಳೆದ ಕೆಲ ದಿನಗಳ ಹಿಂದೆ ನೈಸ್ ಕಂಪನಿ ಆರಂಭದಿಂದ ಎಸಗಿರುವ ಅವ್ಯವಹಾರ ಗೊಟ್ಟಿಗೆರೆಯಲ್ಲಿ ಮಾರ್ಗ ಬದಲಾವಣೆ ಸೇರಿ ಅನೇಕ ವಿಷಯಗಳು ಪುಸ್ತಕ ರೂಪದಲ್ಲಿ ಹೊರತಂದಿದ್ದ ಜೆಡಿಎಸ್ ವರಿಷ್ಠ ದೇವೇಗೌಡ ಹೈಕೋರ್ಟ್ ಮುಖ್ಯ ನ್ಯಾಯಾಮೂರ್ತಿಗಳಿಗೆ ತಮ್ಮ ವಕೀಲರ ಮೂಲಕ ರವಾನಿಸಲಿದ್ದರು.
(ದಟ್ಸ್ ಕನ್ನಡ ವಾರ್ತೆ)