ಸಿಐಡಿ ಪೊಲೀಸರಿಂದ ಸತ್ಯಂ ರಾಜು ಬಂಧನ
ಹೈದರಾಬಾದ್, ಜ. 10 : ಕಟ್ಟಿದ ಕಂಪನಿಗೇ 7000 ಕೋಟಿ ರು. ಪಂಗನಾಮ ಹಾಕಿದ ಸತ್ಯಂ ಸಂಸ್ಥಾಪಕ ಬಿ. ರಾಮಲಿಂಗ ರಾಜು ಶುಕ್ರವಾರ ರಾತ್ರಿ ಪೊಲೀಸ್ ಮಹಾನಿರ್ದೇಶಕ ಎಸ್.ಎಸ್.ಪಿ ಯಾದವ್ ಅವರ ಮುಂದೆ ಶರಣಾಗತರಾಗಿದ್ದಾರೆ. ರಾಜು ಅವರು ಬಂಧನಕ್ಕೆ ಹೆದರಿ ಭೂಗತರಾಗಿದ್ದಾರೆ, ದೇಶ ತೊರೆದಿದ್ದಾರೆ ಎಂಬಿತ್ಯಾದಿ ಊಹಾಪೋಹಗಳಿಗೆ ಅವರ ಬಂಧನ ತೆರೆ ಎಳೆದಿದೆ.
ರಾಜು ಅವರು ತಮ್ಮ ಸಹೋದರನೊಂದಿಗೆ ಪೊಲೀಸ್ ಮಹಾನಿರ್ದೇಶಕರ ಮುಂದೆ ಶುಕ್ರವಾರ ರಾತ್ರಿ ಹಾಜರಾದರು. ರಾಜುವನ್ನು ಭಾರತೀಯ ದಂಡ ಸಂಹಿತೆಯ ನಿಯಮ 420, 406, 120ಬಿ ಮತ್ತು 471 ಅಡಿಯಲ್ಲಿ ಬಂಧಿಸಲಾಗಿದೆ. ರಾಜು ಸಹೋದರ ರಾಮರಾಜು ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಸಿಐಡಿ ವಶಕ್ಕೆ ಒಪ್ಪಿಸಲಾಗಿದೆ.
ರಾಮಲಿಂಗ ರಾಜು ಮತ್ತು ಅವರ ಸಹೋದರ ರಾಮರಾಜು ಅವರನ್ನು ಶುಕ್ರವಾರ ಇಡೀ ರಾತ್ರಿ ಸಿಐಡಿ ಪೊಲೀಸರು ವಿಚಾರಣೆಗೆ ಗುರಿಪಡಿಸಿದರು. ಆರಂಭದಲ್ಲಿ ಎದೆ ನೋವು ಬರುತ್ತಿದೆ ಎಂದು ರಾಮಲಿಂಗ ರಾಜು ದೂರು ನೀಡಿದ್ದರು. ವೈದ್ಯರನ್ನು ಕರೆಸಿ ಪರೀಕ್ಶಿಸಿ ಅವರ ಆರೋಗ್ಯ ಸ್ಥಿತಿ ಸಹಜ ಸ್ಥಿತಿಯಲ್ಲಿದೆ ಎಂದು ತಿಳಿದ ಬಳಿಕ ವಿಚಾರಣೆಯನ್ನು ಮುಂದುವರಿಸಿದರು. ಅವರಿಬ್ಬರನ್ನು ಇಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬೆಂಬಲ ಹೊಂದಿದ್ದ ರಾಜು ಮೇಲೆ ಈಗಿನ ಮುಖ್ಯಮಂತ್ರಿ ವೈಎಲ್ ರಾಜಶೇಖರ ರೆಡ್ಡಿ ಕೂಡ ಮೃದುಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ರಾಜುವನ್ನು ಕೂಡಲೆ ಬಂಧಿಸಬೇಕೆಂದೂ ಒತ್ತಡಗಳು ಬರುತ್ತಿದ್ದವು. ಇದರಿಂದ ವಿಚಲಿತರಾದ ರೆಡ್ಡಿ ರಾಜು ಅವರನ್ನು ಕೂಡಲೆ ಬಂಧಿಸಬೇಕೆಂದು ಆದೇಶಿಸಿದ್ದರು.
ಸತ್ಯಂನಲ್ಲಿ ಪ್ರಸ್ತುತ ಇರುವ ನಿರ್ದೇಶಕರ ಮೇಲೂ ನಂಬಿಕೆ ಕಳೆದುಕೊಂಡಿರುವ ಕೇಂದ್ರ ಸರ್ಕಾರ ಕಂಪನಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಶನಿವಾರ ನಡೆಯಬೇಕಿದ್ದ ಆಡಳಿತ ಮಂಡಳಿಯ ಸಭೆಯನ್ನು ರದ್ದು ಮಾಡಲಾಗಿದೆ. ಕೇಂದ್ರ ಶೀಘ್ರ 10 ಜನರನ್ನು ಆಡಳಿತ ಮಂಡಳಿಗೆ ನೇಮಕ ಮಾಡಲಿದೆ. ನೇಮಕ ಮಾಡಿದ ಏಳು ದಿನಗಳಲ್ಲಿ ಹೊಸ ಆಡಳಿತ ಮಂಡಳಿ ಸಭೆ ನಡೆಸಲಿದೆ. ಸೆಬಿ ಮುಖ್ಯಸ್ಥ ಡಿ ದಾಮೋದರನ್ ಅವರು ಆಡಳಿತ ಮಂಡಳಿಯ ನೇತೃತ್ವ ವಹಿಸುವ ಸಾಧ್ಯತೆಯಿದೆ.
(ಏಜೆನ್ಸೀಸ್)