ಧಾರವಾಡ, ಪ್ರತಿಭಟನೆ, ಉದ್ವಿಗ್ನ ಪರಿಸ್ಥಿತಿ
ಧಾರವಾಡ, ಜ. 9 : ನಿಷೇದಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಲು ಯತ್ನಿಸಿದ ವಕೀಲರ ಸಂಘ ಹಾಗೂ ಪೊಲೀಸರ ನಡುವೆ ನಡೆದ ಮಾತಿನ ಚಕಮಕಿ ಹಾಗೂ ನೂಕಾಟ ತಳ್ಳಾಟ ನಡೆದಿದ್ದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿರುವ ಪ್ರಕರಣ ಧಾರವಾಡದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕಳೆದ ಒಂದು ವಾರದ ಹಿಂದೆ ದಲಿತ ವ್ಯಕ್ತಿ ಹಾಗೂ ಲಿಂಗಾಯಿತ ವಕೀಲರ ನಡುವೆ ನಡೆದ ಜಗಳ ಇಂದು ಈ ಮಟ್ಟ ಬಂದು ತಲುಪಿದೆ. ದಲಿತ ವ್ಯಕ್ತಿ ಸಾಗರ್ ಎನ್ನುವಾತ ಲಿಂಗಾಯಿತ ಕೋಮಿಗೆ ಸೇರಿದ ವಕೀಲರೊಬ್ಬರಿಗೆ ಮನಬಂದಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಲ್ಲದೇ ಲಿಂತಾಯಿತ ವಕೀಲರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿದ್ದು ಹುಬ್ಬಳ್ಳಿ ಧಾರವಾಡ ವಕೀಲರ ಸಂಘದ ಕೆಂಗೆಣ್ಣಿಗೆ ಗುರಿಯಾಗಿತ್ತು.
ಯಾವ ಅಪರಾಧ ಮಾಡದ ಲಿಂಗಾಯಿತ ವಕೀಲನ ಮೇಲೆ ಸಾಗರ್ ಅಟ್ರಾಸಿಟಿ ಕೇಸನ್ನು ಹಾಕಿದ್ದಾರೆ. ಈ ಮೂಲಕ ಕಾನೂನುನನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಕೂಡಲೇ ಅಟ್ರಾಸಿಟಿ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಬಿ ಡಿ ಹಿರೇಮಠ ನೇತೃತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಇಂದು ಪ್ರತಿಭಟನೆ ವಿಕೋಪಕ್ಕೆ ತಿರುಗಿತು. ಪರಿಸ್ಥಿತಿ ಅರಿತ ಪೊಲೀಸರು ಇಂದು ನಿಷೇದಾಜ್ಞೆ ಜಾರಿಗೊಳಿಸಿದ್ದರು. ನಿಷೇಧಾಜ್ಞೆ ಉಲ್ಲಂಘಿಸಿದ ವಕೀಲರು ಪ್ರತಿಭಟನೆ ಮುಂದುವರಿಸಿದರು. ಇದರಿಂದ ವಕೀಲರು ಹಾಗೂ ಪೊಲೀಸರು ನಡುವೆ ಮಾತಿನ ಚಕಮಕಿ ನಡೆಯಿತು. ವಕೀಲರು ಪ್ರತಿಭಟನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ದತ್ತಾ ದೊರ್ಲೇ, ಮಾಜಿ ಶಾಸಕ ವಿನಯ ಕುಲಕರ್ಣಿ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಕೀಲರ ಸಂಘದ ಅಧ್ಯಕ್ಷ ಬಿ ಡಿ ಹಿರೇಮಠ, ಇದು ನ್ಯಾಯಕ್ಕಾಗಿ ಹೋರಾಟವೇ ಹೊರತು ದಲಿತರ ವಿರುದ್ಧ ಹೋರಾಟವಲ್ಲ. ಅಟ್ರಾಸಿಟಿ ಕಾನೂನನ್ನು ಕೆಲ ದುಷ್ಕರ್ಮಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಕಾನೂನನಿಗೆ ತಿದ್ದುಪಡಿ ತರಬೇಕು ಎನ್ನುವುದು ಪ್ರತಿಭಟನೆ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)