ಎನ್ಎಸ್ ಜಿ ಘಟಕ ಸ್ಥಾಪಿಸಿ ಸಿಎಂ ಮೊರೆ
ನವದೆಹಲಿ, ಜ. 5 : ತಾಂತ್ರಿಕವಾಗಿ ಹಾಗೂ ವೈಜ್ಞಾನಿಕವಾಗಿ ತುಂಬಾ ಮುಂದುವರಿದಿರುವ ನಗರ ಬೆಂಗಳೂರಿನಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ಘಟಕವನ್ನು ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಅವರು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.
ಜ 6 ರಂದು ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿರುವ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಸಾಫ್ಟವೇರ್ ತಂತ್ರಜ್ಞರ ನೆಲೆಯಾಗಿರುವ ಬೆಂಗಳೂರಿಗೆ ಸೂಕ್ಷ ರಕ್ಷಣೆ ಅಗತ್ಯವಾಗಿ ಬೇಕಾಗಿದೆ ಎಂದು ಹೇಳಿದರು. ಮುಂಬೈ, ಚೆನ್ನೈ, ಹೈದರಾಬಾದ್ ಹಾಗೂ ಕೊಲ್ಕತ್ತಾದಲ್ಲಿ ಎನ್ಎಸ್ ಜಿ ಸ್ಥಾಪಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಇದರ ಜೊತೆಗೆ ಬೆಂಗಳೂರಿನಲ್ಲೂ ಎನ್ ಎಸ್ ಜಿ ಘಟಕ ಸ್ಥಾಪಿಸಿ ಎಂದು ಪ್ರಧಾನಿಯವರನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ದೇಶದ ಪ್ರತಿಷ್ಠಿತ ಸಾಫ್ಟವೇರ್ ಕಂಪನಿಗಳಾದ ಇನ್ಫೋಸಿಸ್, ವಿಪ್ರೋದಂತಹ ಕಂಪನಿಗಳ ಮೇಲೆ ಉಗ್ರರ ಕಣ್ಣು ಬಿದ್ದಿದೆ. ಈ ಕಂಪನಿಗಳ ಮೇಲೆ ಉಗ್ರರ ದಾಳಿ ನಡೆಸುತ್ತೇವೆ ಎಂಬ ಬೆದರಿಕೆ ಇಮೇಲ್ ಪತ್ರಗಳು ಬಂದಿವೆ. ಈ ಎಲ್ಲದರ ನಡುವೆಯೂ ಸರ್ಕಾರ ಕೂಡ ಭಾರಿ ಭದ್ರತಾ ಕ್ರಮವನ್ನು ಕೈಗೊಂಡಿದೆ. ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಸರ್ಕಾರದ ಮೊರೆಯನ್ನು ಆಲಿಸಬೇಕು. ನಮ್ಮ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ಯಡಿಯೂರಪ್ಪ ಮನವಿ ಮಾಡಿಕೊಂಡರು. ಇಂದು ಸಂಜೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾತುಕತೆ ನಡೆಸಲಾಗುವುದು ಎಂದರು.
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಘೋಷಿಸಿರುವ ಕೇಂದ್ರ ಅದರ ಅಭಿವೃದ್ಧಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಬೇಕು ಎಂದು ಒತ್ತಾಯಿಸಲಾಗುವುದು. ಹಾಗೂ ನಡೆದಾಡುವ ದೇವರೆಂದೆ ಖ್ಯಾತರಾಗಿರುವ ತುಮಕೂರಿನ ಸಿದ್ಧಗಂಗಾ ಸ್ವಾಮೀಜಿಗಳ 101 ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿಯರಿಗೆ ಅಧಿಕೃತವಾಗಿ ಅಹ್ವಾನಿಸಿ ಪಾಲ್ಗೊಳ್ಳಲು ಮನವಿ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಐಟಿ ಕಂಪೆನಿಗಳಿಗೆ ಉಗ್ರರಿಂದ ಬೆದರಿಕೆ ಪತ್ರ











Click it and Unblock the Notifications