ಟಿವಿ 9 ಸೇರಿ ಮಾಧ್ಯಮಗಳಿಗೆ ನೋಟಿಸ್
ಬೆಂಳೂರು, ಜ.5: 16 ವರ್ಷದ ಬಾಲಕನೊಬ್ಬನನ್ನು ಶಸ್ತ್ರಚಿಕಿತ್ಸೆ ಮಾಡಿ ಬಲವಂತ ಲಿಂಗ ಪರಿವರ್ತನೆಗೆ ಮಾಡಲಾಗಿತ್ತು. ನಂತರ ಆ ಬಾಲಕನನ್ನು ಲೈಂಗಿಕ ಕಾರ್ಯಕರ್ತರಿಂದ ರಕ್ಷಿಸಿ ಸೂಕ್ತ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕನ್ನಡದ ಹಲವಾರು ದೈನಿಕ ಪತ್ರಿಕೆಗಳು ಮತ್ತು ಟಿವಿ ವಾಹಿನಿಯೊಂದು ಆ ಬಾಲಕನ ಕುರಿತು ಚಿತ್ರ ಸಮೇತ ಸುದ್ದಿ ಪ್ರಕಟಿಸಿದ್ದವು. 18 ವರ್ಷದೊಳಗಿನ ಬಾಲಾಪರಾಧಿಗಳ ವಿವರಗಳನ್ನು ಮಾಧ್ಯಮಗಳು ಬಹಿರಂಗಪಡಿಸುವಂತಿಲ್ಲ ಎಂದು ಕಾನೂನು ಹೇಳುತ್ತದೆ. ಆದರೂ ಈ ಕಾನೂನನ್ನು ಉಲ್ಲಂಘಿಸಿದ ಆರೋಪದ ಮೇಲೆ ಕನ್ನಡದ ಕೆಲವು ದೈನಿಕ ಪತ್ರಿಕೆಗಳು ಮತ್ತು ಟಿವಿ ವಾಹಿನಿಯೊಂದಕ್ಕೆ ಮಕ್ಕಳ ಕಲ್ಯಾಣ ಸಮಿತಿ ನೋಟೀಸು ಜಾರಿಗೊಳಿಸಿದೆ.
ನವೆಂಬರ್ ತಿಂಗಳಲ್ಲಿ ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದದ್ದನ್ನು ಕಂಡು ಪರ್ಯಾಯ ಕಾನೂನು ವೇದಿಕೆ (ಎಎಲ್ ಎಫ್) ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿತ್ತು. ಬಾಲಕನ ಭಾವಚಿತ್ರ ಪ್ರಕಟಿಸಿರುವ ಬಗ್ಗೆಯೂ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದೆ. ಬಾಲಾಪರಾಧ ನ್ಯಾಯ(ಪಾಲನೆ ಮತ್ತು ರಕ್ಷಣೆ) ಕಾನೂನಿನ ಸೆಕ್ಷನ್ 21ರ ಉಲ್ಲಂಘನೆಯಾಗಿದೆ ಎಂದು ಎಎಲ್ ಎಫ್ ಆರೋಪಿಸಿದೆ. ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ಬಾಲಕನ ಹೆಸರು ಮತ್ತು ವಿವರಗಳನ್ನು ಬಹಿರಂಗಪಡಿಸುವಂತಿಲ್ಲ ಎಂದು ಸೆಕ್ಷನ್ ತಿಳಿಸುತ್ತದೆ. ಈ ಕಾನೂನನ್ನು ಉಲ್ಲಂಘಿಸಿದರೆ ರು.25,000 ದಂಡ ವಿಧಿಸಲಾಗುತ್ತದೆ ಎಂದು ಸೆಕ್ಷನ್ ಹೇಳುತ್ತದೆ.
ಈ ಸಂಬಂಧ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್, ಕನ್ನಡ ಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ, ಈನಾಡು ಮತ್ತು ಟಿವಿ9 ಕನ್ನಡ ವಾಹಿನಿಗಳಿಗೆ ನೋಟಿಸ್ ಮಕ್ಕಳ ಕಲ್ಯಾಣ ಸಮಿತಿ ಜಾರಿಗೊಳಿಸಿದೆ. ಕಾನೂನಿನ ಬಗ್ಗೆ ನಿಮಗೆ ಅರಿವಿದೆಯೇ ಎಂದು ವಿವರ ನೀಡುವಂತೆ ಪತ್ರಿಕೆಗಳು ಮತ್ತು ಟಿವಿ ವಾಹಿನಿಗೆ ನೋಟೀಸಿನಲ್ಲಿ ಕೇಳಲಾಗಿದೆ. ಈ ರೀತಿಯ ಕಾನೂನು ಉಲ್ಲಂಘನೆ ಘಟನೆಗಳು ಮುಂದುವರಿದರೆ, ನಾವು ಕಾನೂನು ರೀತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಾಸುದೇವ ಶರ್ಮಾ ತಿಳಿಸಿದ್ದಾರೆ.
''ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ನಾವು ಸುದ್ದಿಯನ್ನು ಪ್ರಕಟಿಸಿದ್ದೇವೆ'' ಎಂದು ಪ್ರಜಾವಾಣಿ ಪ್ರತಿನಿಧಿ ಮಕ್ಕಳ ಕಲ್ಯಾಣ ಸಮಿತಿಗೆ ವಿವರ ನೀಡಿದ್ದಾರೆ. ಇದುವರೆಗೂ ನಾವು ಯಾವುದೇ ಕಾನೂನನ್ನು ಉಲ್ಲಂಘಿಸಿ ಸುದ್ದಿಗಳನ್ನು ಪ್ರಕಟಿಸಿಲ್ಲ ಎಂದು ಅವರು ಸಮಿತಿಗೆ ಸ್ಪಷ್ಟಪಡಿಸಿದ್ದಾರೆ. ಉಳಿದ ಪತ್ರಿಕೆಗಳು ಮತ್ತು ಟಿವಿ ವಾಹಿನಿಯ ಪ್ರತಿಕ್ರಿಯೆಗಾಗಿ ಮಕ್ಕಳ ಕಲ್ಯಾಣ ಸಮಿತಿ ನಿರೀಕ್ಷಿಸುತ್ತಿದೆ.
ಬಾಲಾಪರಾಧಿಗಳ ಕುರಿತು ಪೊಲೀಸರು ನೀಡುವ ಪತ್ರಿಕಾ ಪ್ರಕಟಣೆಗಳು ಹಾಗೂ ಫೋಟೋಗಳನ್ನು ಪತ್ರಿಕೆಗಳು ಪ್ರಕಟಿಸುತ್ತವೆ. ಇದರಲ್ಲಿ ನಮ್ಮ ತಪ್ಪೇನೂ ಇಲ್ಲ ಎಂಬುದು ಮಾಧ್ಯಮಗಳ ವಾದ. ಆದರೆ ಈ ವಾದವನ್ನು ಎಎಲ್ ಎಫ್ ನ ಆರತಿ ಮುಂಡಕೂರು ಒಪ್ಪುತ್ತಿಲ್ಲ. ಇದಕ್ಕೆಲ್ಲಾ ಪೊಲೀಸರನ್ನು ಹೊಣೆ ಮಾಡುವುದು ಸರಿಯಲ್ಲ. ಪತ್ರಿಕಾ ಪ್ರಕಟಣೆಗಾಗಿ ಪೊಲೀಸರು ಬಾಲಾಪರಾಧಿಗಳ ಹೆಸರನ್ನು ನೀಡುತ್ತಾರೆ. ಆದರೆ ಮಾಧ್ಯಮಗಳಿಗೆ ಬಾಲಪರಾಧಿಗಳ ಫೋಟೋ ಮತ್ತಿತರ ವಿವರಗಳನ್ನು ಬಹಿರಂಗಪಡಿಸಬಾರದು ಎಂಬ ಕಾನೂನಿನ ತಿಳಿವಳಿಕೆ ಇರಬೇಕಾಗುತ್ತದೆ ಎನ್ನುತ್ತಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications