ಸಾಕ್ಷಿ ಸಿಕ್ಕರೆ ಉಗ್ರರ ವಿಚಾರಣೆಗೆ ಅವಕಾಶ :ಪಾಕ್
ಇಸ್ಲಾಮಾಬಾದ್, ಜ. 4 : ಕಳೆದ ವರ್ಷ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಭಯೋತ್ಪಾದನೆಯಲ್ಲಿ ಪಾಕಿಸ್ತಾನ ಮೂಲಕ ಉಗ್ರರ ಕೈವಾಡವಿದೆ ಎನ್ನುವುದಕ್ಕೆ ಅಗತ್ಯ ಸಾಕ್ಷ್ಯಾಧಾರಗಳನ್ನು ಒದಗಿಸಿದರೆ ಭಾರತಕ್ಕೆ ಪಾಕ್ ನಲ್ಲಿ ಬಂಧಿತರಾಗಿರುವ ಉಗ್ರರ ವಿಚಾರಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಪಾಕ್ ಸರ್ಕಾರದ ಮೂಲಗಳು ತಿಳಿಸಿವೆ.
ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ತನ್ನ ನೆಲದಲ್ಲಿ ಬಂಧಿತರಾಗಿರುವ ಉಗ್ರರ ವಿರುದ್ಧ ಭಾರತ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಿದರೆ ವಿಚಾರಣೆಗೆ ಪಾಕ್ ನಲ್ಲಿ ಉಗ್ರರ ವಿಚಾರಣೆಗೆ ಪಾಕ್ ಸರ್ಕಾರ ವ್ಯವಸ್ಥೆ ಮಾಡಲಿದೆ. ಆದರೆ, ಬಂಧಿತ ಉಗ್ರರನ್ನು ಯಾವ ಕಾರಣಕ್ಕೂ ಭಾರತಕ್ಕೆ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ ಎಂದು ಪಾಕಿಸ್ತಾನ ದಿ ನೇಷನ್ ಎಂಬ ಪತ್ರಿಕೆಯಲ್ಲಿ ಪಾಕ್ ಸೇನಾಪಡೆಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಲಷ್ಕರ್ ಇ ತೊಯ್ಬಾ ಸಂಘಟನೆಯ ಝಾಕೀರ್ ರೆಹೆಮಾನ್ ಲಖ್ವಿ ಹಾಗೂ ಜರಾರ್ ಶಾ ಇಬ್ಬರು ಮುಂಬೈ ದಾಳಿ ಪ್ರಮುಖ ರೂವಾರಿಗಳು. ಇವರ ವಿರುದ್ಧ ಭಾರತ ಆರೋಪ ಮಾಡುವುದನ್ನು ಬಿಟ್ಟು ಅಗತ್ಯ ಸಾಕ್ಷ್ಯಾಧಾರಗಳನ್ನು ಒದಗಿಸಲಿ. ಸಾಕ್ಷ್ಯಾಧಾರಗಳು ಸತ್ಯತೆ ಕಂಡು ಬಂದಲ್ಲಿ ಪಾಕ್ ಸರ್ಕಾರವೇ ಈ ಇಬ್ಬರೂ ಆರೋಪಿಗಳ ವಿಚಾರಣೆಗೆ ವೇದಿಕೆ ಕಲ್ಪಿಸಿಕೊಡುತ್ತದೆ ಎಂದು ಹೇಳಿದೆ.
ಭಾನುವಾರ ಶಿಲಾಂಗ್ ನಲ್ಲಿ ನಡೆದ 96ನೇ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವುದಿಲ್ಲ. ಅದರಿಂದ ಯಾವ ಪ್ರಯೋಜನವೂ ಆಗದು. ಆದರೆ, ಪಾಕಿಸ್ತಾನ ಭಯೋತ್ಪಾದನೆ ನಿರ್ನಾಮಕ್ಕೆ ಕೈಜೋಡಿಸಬೇಕು. ಪಾಕ್ ಸರ್ಕಾರ ಬಂಧಿಸಿರುವ ಉಗ್ರರನ್ನು ಕೂಡಲೇ ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications