ಜನವರಿ ಅಂತ್ಯಕ್ಕೆ ಸಿದ್ದು ಹೊಸ ಪಕ್ಷ ಶುರು?
ಬೆಂಗಳೂರು, ಡಿ. 2 : ಕೊನೆಗೂ ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಲು ನಿರ್ಧರಿಸಿದ್ದಾರೆ. ಈ ತಿಂಗಳ ಮಾಸಾಂತ್ಯಕ್ಕೆ ದಾವಣಗೆರೆಯಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿ ನೂತನ ಪಕ್ಷ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಕೂಡಾ ಕೈಗೆ ಬಲ ನೀಡುವ ಸನ್ನಾಹದಲ್ಲಿದ್ದು, ಜನವರಿ 5 ರಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಆ ಮೂಲಕ ರಾಜ್ಯ ರಾಜಕೀಯದಲ್ಲಿ ಧೃವೀಕರಣ ನಡೆಯುವುದು ಖಚಿತವಾಗಿದೆ.
ಕಾಂಗ್ರೆಸ್ ನಲ್ಲಿ ಮೂಲೆಗುಂಪಾಗಿರುವ ಸಿದ್ದರಾಮಯ್ಯ ಪಕ್ಷದ ವರಿಷ್ಠರ ಕ್ರಮಕ್ಕೆ ಬೇಸತ್ತು ಕಳೆದ ಉಪಚುನಾನಣೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರಲಿಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಭಾರಿ ಪೆಟ್ಟು ನೀಡಿದ್ದು, ಕುರುಬ ಮತಗಳು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲು ಕಾರಣವಾಯಿತು. ಈ ಕಾರಣಕ್ಕಾಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲನುಭವಿಸಿ ಮುಖಭಂಗ ಎದುರಿಸಬೇಕಾಯಿತು. ಫಲಿತಾಂಶ ಪ್ರಕಟವಾಗಿ ಮರುದಿನ ರಾಜ್ಯ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ವಿರುದ್ಧ ವ್ಯಾಪಕ ಟೀಕೆಗಳ ಸುರಿಮಳೆಯನ್ನೇ ಸುರಿಸಲು ಆರಂಭಿಸಿದರು.
ಡಿಕೆ ಶಿವಕುಮಾರ್, ಖರ್ಗೆ ಅವರಂತೂ ಖಾರವಾಗಿ ಪ್ರತಿಕ್ರಿಯೆ ನೀಡಿ, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ತಮ್ಮ ದಾರಿ ನೋಡಿಕೊಳ್ಳವುದು ಸೂಕ್ತ ಎಂದು ಹೇಳಿಕೆ ನೀಡಿದರು. ಇದು ಸಿದ್ದು ಮೇಲೆ ಗಾಯದ ಮೇಲೆ ಬರೆ ಎಳೆದ ಹಾಗಾಯಿತು. ಮೂರು ವರ್ಷಗಳ ಕಾಲ ಕಾಂಗ್ರೆಸ್ ಸಹವಾಸ ಮಾಡಿದ ಸಿದ್ದರಾಮಯ್ಯ, ಶಾಸಕರಾಗಿದ್ದು ಬಿಟ್ಟರೆ ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ. ಕೆಪಿಸಿಸಿ ಅಧ್ಯಕ್ಷಗೆ ಕಣ್ಣಿಟ್ಟಿದ್ದ ಸಿದ್ದು ಕನಸು ದೇಶಪಾಂಡೆ ಆ ಹುದ್ದೆ ಅಲಂಕರಿಸುವ ಮೂಲಕ ಅದು ಭಗ್ನಗೊಂಡಿತು. ಈ ಎಲ್ಲ ಅಂಶಗಳನ್ನು ಗಮನದಲ್ಲಿಸಿಕೊಂಡು ನೂತನ ಪಕ್ಷ ರಚನೆಗೆ ಕೈಹಾಕಿದ್ದಾರೆ ಎನ್ನಲಾಗಿದೆ.
ಈ ತಿಂಗಳಾಂತ್ಯಕ್ಕೆ ದಾವಣಗೆರೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಬೃಹತ್ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ. ಇದರಲ್ಲಿ ಸುಮಾರು 10 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ಅದೇ ಸಿದ್ದರಾಮಯ್ಯ ನೂತನ ಪಕ್ಷ ರಚನೆ ಸ್ಪಷ್ಟ ಚಿತ್ರಣವನ್ನು ಜನರ ಮುಂದಿಡಲಿದ್ದಾರೆ ಎಂದು ಸಿದ್ದರಾಮಯ್ಯ ಅವರ ಅಪ್ತರಾದ ಕೋಲಾರ ಶಾಸಕ ಹಾಗೂ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ವರ್ತೂರು ಪ್ರಕಾಶ ತಿಳಿಸಿದ್ದಾರೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಗೆದ್ದವರು ಬಿದ್ದವರು: ಮತಗಳಿಕೆ ವಿವರ











Click it and Unblock the Notifications