ಮತ್ತೆ ಗೌಡರ ಗೂಡು ಸೇರಿದ ಡಿಟಿಜೆ
ಬೆಂಗಳೂರು, ಜ. 2 : ಕಳೆದ ಮೇ ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ದೊರೆಯಲಿಲ್ಲ ಎನ್ನವ ಕಾರಣ ದೇವೇಗೌಡರೊಂದಿಗೆ ಮುನಿಸಿಕೊಂಡು ಪಕ್ಷ ತ್ಯಜಿಸಿದ್ದ ಮಾಜಿ ಸಚಿವ ಡಿ ಟಿ ಜಯಕುಮಾರ್ ಇಂದು ಮತ್ತೆ ಮಾತೃ ಪಕ್ಷಕ್ಕೆ ಮರಳಿದ್ದಾರೆ. ಇಂದು ಜೆಡಿಎಸ್ ವರಿಷ್ಠ ದೇವೇಗೌಡರ ನಿವಾಸದಲ್ಲಿ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾದರು.
ಡಿ ಟಿ ಜಯಕುಮಾರ್ ಮರಳಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಸಂತಸ ವ್ಯಕ್ತಪಡಿಸಿದ ದೇವೇಗೌಡ, ಹೊಸ ವರ್ಷದ ಆರಂಭದಲ್ಲಿ ಜಯಕುಮಾರ್ ಪಕ್ಷಕ್ಕೆ ಮರಳಿದ್ದು ಸಂತೋಷದ ವಿಚಾರವಾಗಿದೆ ಎಂದರು. ಕಳೆದ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಚಿಕ್ಕ ಮನಸ್ತಾಪ ಆಗಿದ್ದು ನಿಜ ಎಂದು ಒಪ್ಪಿಕೊಂಡ ದೇವೇಗೌಡ, ತಪ್ಪನ್ನು ಮನಸ್ಸಿನಲ್ಲಿಟ್ಟುಕೊಂಡು ಜಯಕುಮಾರ್ ಪಕ್ಷದಿಂದ ಹೊರಕ್ಕೆ ಹೋಗಿದ್ದರು. ಆದರೆ ಇದೀಗ ಮತ್ತೆ ಪಕ್ಷಕ್ಕೆ ಮರಳುವ ನಿರ್ಧಾರ ಕೈಗೊಂಡಿದ್ದು ಉತ್ತಮ ನಿರ್ಧಾರವಾಗಿದೆ. ಹಿರಿಯ ನಾಯಕರಾಗಿರುವ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡಲಾಗುವುದು ಎಂದರು. ಡಿ ಟಿ ಜಯಕುಮಾರ್ ಜೆಡಿಎಸ್ ತೊರೆದು ಬಿಎಸ್ಪಿ ಸೇರ್ಪಡೆಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು.
ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸಿದ ದೇವೇಗೌಡ, ಯಡಿಯೂರಪ್ಪ ಹೊಸ ವರ್ಷಕ್ಕೆ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದಾರೆ, ಅದು ಕೂಡಲೇ ಕಾರ್ಯರೂಪಕ್ಕೆ ಬರಲಿ ಎಂದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)