ಜ.16ರಿಂದ ಬೆಳಗಾವಿಯಲ್ಲಿ ಜಂಟಿ ಅಧಿವೇಶನ
ಬೆಂಗಳೂರು, ಡಿ. 18 : ಉಭಯ ಸದನಗಳ ಜಂಟಿ ಅಧಿವೇಶನವನ್ನು ಜನವರಿ 16ರಿಂದ ಬೆಳಗಾವಿಯಲ್ಲಿ ನಡೆಸಲು ರಾಜ್ಯ ಸಂಪುಟ ನಿರ್ಧರಿಸಿದೆ.
ಸಂಪುಟ ಸಭೆಯ ನಂತರ ಅಧಿವೇಶನ ಮತ್ತು ಸಂಪುಟದ ನಿರ್ಣಯಗಳ ವಿವರಗಳನ್ನು ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅವರು, ರಾಜ್ಯಪಾಲರು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಧಿವೇಶನ ಹತ್ತು ದಿನಕ್ಕೂ ಅಧಿಕ ನಡೆಯುವ ಸಾಧ್ಯತೆಯಿದೆ ಎಂದರು.
ರಾಜ್ಯದ ಚರ್ಚುಗಳ ಮೇಲಾದ ದಾಳಿಯ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ್ ಆಯೋಗದ ಅವಧಿಯನ್ನು ಮಾರ್ಚ್ 18ರವರೆಗೆ ವಿಸ್ತರಿಸಲಾಗಿದೆ ಎಂದು ಕರಂದ್ಲಾಜೆ ತಿಳಿಸಿದರು.
ಬಡ ಹೆಣ್ಣುಮಕ್ಕಳ ಕಲ್ಯಾಣಕ್ಕಾಗಿ ಆರಂಭಿಸಿರುವ 'ಭಾಗ್ಯಲಕ್ಷ್ಮಿ' ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಭಾರತೀಯ ಜೀವನವಿಮಾ ನಿಗಮಕ್ಕೆ ಕೇಳಿಕೊಳ್ಳಲಾಗುವುದು. ಬಡ ಕುಟುಂಬದಲ್ಲಿ ಹುಟ್ಟಿದ ಮೊದಲ ಹೆಣ್ಣು ಮಗು 15 ವರ್ಷ ಆದಾಗ 50 ಸಾವಿರ ರು. ಶೈಕ್ಷಣಿಕ ಸಾಲ ಸಿಗುವಂತೆ ಮಾಡಲು 10 ಸಾವಿರಕ್ಕೆ ಬದಲಾಗಿ 19,300 ರು. ಒಂದುಬಾರಿಯ ಕಂತನ್ನು ಸರ್ಕಾರ ಪಾವತಿಸುತ್ತದೆ. ಹುಡುಗಿಗೆ 18 ವರ್ಷವಾದಾಗ 1.92 ಲಕ್ಷ ರು. ಸಿಗಲಿದೆ ಎಂದು ಶೋಭಾ ವಿವರಿಸಿದರು.
ಎರಡನೇ ಹೆಣ್ಣು ಮಗುವಿಗೂ ಈ ಯೋಜನೆಯ ಫಲ ಲಭಿಸಲಿದೆ. ಈ ಕಂತು 19,100 ರು. ಇದ್ದು ಎರಡನೇ ಹೆಣ್ಣು ಮಗುವಿಗೆ 18 ವಯಸ್ಸು ತುಂಬಿದಾದ 1.62 ಲಕ್ಷ ರು. ಲಭಿಸಲಿದೆ. ಮೊದಲ ಹಣ್ಣುಮಗುವಿನಷ್ಟೇ ಶೈಕ್ಷಣಿಕ ಸಾಲ ಎರಡನೆಯ ಹಣ್ಣುಮಗುವಿಗೂ ದಕ್ಕಲಿದೆ ಎಂದು ಅವರು ತಿಳಿಸಿದರು.
ಏಳು ಖಾಸಗಿ ಕಂಪನಿಗಳು ಖರೀದಿಸಿರುವ ಜಮೀನನ್ನು ಪರಿವರ್ತಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications