ಐಕ್ಯತೆ ತೋರಲು ಬೆಂಗಳೂರಿನಲ್ಲಿ ಎಲ್ಲರೂ ಸೇರೋಣ
ಭಯೋತ್ಪಾದಕರ ದಾಂಗುಡಿಗೆ ಇಡೀ ದೇಶಕ್ಕೆ ದೇಶವೇ ಬೆಚ್ಚಿ ಕುಳಿತಿದೆಯೆ? ಇಲ್ಲ! ಇಡೀ ರಾಷ್ಟ್ರದ ಜನತೆ ಮೈಕೊಡವಿ ನಿಂತಿದೆ. ಬೆಚ್ಚಿ ಬೀಳಬೇಕಾಗಿರುವುದು ನಾವೇ ಆರಿಸಿರುವ ಝಡ್ ರಕ್ಷಣೆ ಪಡೆದಿರುವ ಜನಪ್ರತಿನಿಧಿಗಳು.
ಈಗಿಲ್ಲದಿದ್ದರೆ ಇನ್ನೆಂದೂ ಇಲ್ಲ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಸುತ್ತಲೂ ರಕ್ಷಣೆಯ ಕೋಟೆ ಹೊಂದಿರುವ ರಾಜಕಾರಣಿಗಳು ಸುರಕ್ಷಿತವಾಗಿದ್ದಾರೆ. ಆದರೆ ನಾವು ಅಂದರೆ ಜನಸಾಮಾನ್ಯರು ಸುರಕ್ಷಿತವಾಗಿದ್ದೆವಾ? ನಮ್ಮ ಸುರಕ್ಷತೆಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಏನು ಏರ್ಪಾಡು ಮಾಡಿದ್ದಾರೆ? ಅಸಲಿಗೆ ನಮ್ಮ ಪೊಲೀಸ್ ವ್ಯವಸ್ಥೆ ಮುಂಬೈ ಸ್ಫೋಟದಂಥ ಆಪತ್ತನ್ನು ಎದುರಿಸಲು ಸಿದ್ಧವಾಗಿದೆಯಾ? ಬೆಳಿಗ್ಗೆ ಮನೆ ಬಿಟ್ಟೋರು ಸುರಕ್ಷಿತವಾಗಿ ಸಂಜೆ ಮರಳುತ್ತೇವಾ?
ಪ್ರಶ್ನೆ ಕೇಳದಿದ್ದರೆ ನಮಗೆಂದೂ ಉತ್ತರ ಸಿಗುವುದಿಲ್ಲ. ಗೆದ್ದೋನು ಎದ್ದ, ಸುಮ್ಮನಿದ್ದೋನು ಬಿದ್ದ. ಇಷ್ಟು ದಿನ ಸುಮ್ಮನಿದ್ದಿದ್ದೇ ನಮ್ಮ ಬಲಹೀನತೆಯಾಗಿದೆ. ನಮ್ಮ ಒಗ್ಗಟ್ಟು ತೋರಿಸದಿದ್ದರೆ ವೈರಿ ನಮ್ಮನ್ನೇ ಉಡಾಯಿಸಿಬಿಟ್ಟಾನು ಜೋಕೆ? ಮುಂಬೈ ಸ್ಫೋಟ ಇನ್ನೆಂದೂ ಸಂಭವಿಸಬಾರದು, 9/11ನಂಥ ಅವಘಡಗಳಿಗೆ ಅವಕಾಶವನ್ನೇ ನೀಡಬಾರದು. ರಾಷ್ಟ್ರವನ್ನೇ ಒತ್ತೆಯಾಳನ್ನಾಗಿ ಮಾಡಲು ಬಿಡಬಾರದು. ಜನತೆಯೇ ನಮ್ಮ ದೇಶದ ಶಕ್ತಿ. ಒಗ್ಗೂಡಿದ ಶಕ್ತಿಯನ್ನು ಜಗತ್ತಿಗೆ ತೋರಿಸಲು ಇದು ಸಕಾಲ. ನಮ್ಮಿಂದಲೇ ಬದಲಾವಣೆ ಸಾಧ್ಯ.
ಡಿಸೆಂಬರ್ 27ರಂದು ಸಂಜೆ 6 ಗಂಟೆಗೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿಯ ಕಬ್ಬನ್ ರಸ್ತೆಯಲ್ಲಿರುವ ಬಿಆರ್ ವಿ ಮೈದಾನದ ಬಳಿ ಎಲ್ಲರೂ ಒಗ್ಗೂಡೋಣ. ಚೇಂಜ್ ಇಂಡಿಯಾ ರೂವಾರಿ ಆರ್ ಕೆ ಮಿಶ್ರಾ ಆಯೋಜಿಸಿರುವ ಐಕ್ಯತಾ ರ್ಯಾಲಿಯಲ್ಲಿ ಭಾಗವಹಿಸಿ. ಕೈಯಲ್ಲಿ ಬ್ಯಾನರು, ಪೋಸ್ಟರುಗಳು ರಾರಾಜಿಸುತ್ತಿರಲಿ, ಮನದಲ್ಲಿ ತ್ರಿವರ್ಣ ಭಾವನೆ ತುಂಬಿಕೊಂಡಿರಲಿ. ಮೈಮೇಲೆ ಕಪ್ಪು ಬಟ್ಟೆಯಿರಲಿ, ಇಲ್ಲದಿದ್ದರೆ ತೋಳಲ್ಲಿ ಕಪ್ಪು ಪಟ್ಟಿಯಿರಲಿ.
ನೊಂದಾಯಿಸಿಕೊಳ್ಳಲು START CHANGE to 575758ಗೆ ಎಸ್ಎಮ್ಎಸ್ ಕಳಿಸಿ. www.changeindia.in ತಾಣದಲ್ಲಿ ನಿಮ್ಮ ಅಭಿಪ್ರಾಯ ಪ್ರಕಟಿಸಿ.












Click it and Unblock the Notifications