ಹೊಗೆ:ತಮಿಳ್ನಾಡು ವಿರುದ್ಧ ಕರವೇ ಸೆಡ್ಡು
ಬೆಂಗಳೂರು, ಡಿ.6: ''ಹೊಗೇನಕಲ್ ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ವಿಚಾರವಾಗಿ ಕರ್ನಾಟಕದೊಂದಿಗೆ ಮಾತುಕತೆಯ ಅವಶ್ಯತೆ ಇಲ್ಲ. ಹೊಗೇನಕಲ್ ತಮಿಳುನಾಡಿನ ಸ್ವತ್ತು'' ಎಂದು ಹೇಳಿಕೆ ಕೊಟ್ಟಿರುವ ಕರುಣಾನಿಧಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಶನಿವಾರ ಬೆಂಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿತು. ಯಾವುದೇ ಕಾರಣಕ್ಕೂ ಹೊಗೇನಕಲ್ ಯೋಜನೆ ಕೈಗೊಳ್ಳಲು ಬಿಡುವುದಿಲ್ಲ ಎಂದು ತಮಿಳುನಾಡಿಗೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಸಿದರು.
ಅತ್ತ ಹೊಗೇನಕಲ್ ವಿವಾದವನ್ನು ಕೆದಕುತ್ತಾ ಇತ್ತ ಕರ್ನಾಟಕದಲ್ಲಿ ಮತ್ತೊಂದು ವಿವಾದ ಎಬ್ಬಿಸಲು ಕರುಣಾನಿಧಿ ಕುಟಿಲ ತಂತ್ರ ಹೆಣೆಯುತ್ತಿದ್ದಾರೆ.ಬೆಂಗಳೂರು ಹಲಸೂರು ಕೆರೆಯ ಬಳಿ ಇನ್ನೂ ಅನಾವರಣಗೊಳ್ಳದಿರುವ ತಮಿಳು ಕವಿ ತಿರುವಳ್ಳುವರ್ ಅವರ ಪ್ರತಿಮೆಯನ್ನು ವಿವಾದ ವಸ್ತುವಾಗಿಸಲು ಮುಂದಾಗಿದ್ದಾರೆ. ತಮಿಳು ಕವಿಯ ಪ್ರತಿಮೆಯನ್ನು ಕರ್ನಾಟಕದಲ್ಲಿ ಅನಾವರಣಗೊಳಿಸುವಂತೆ ಕೇಂದ್ರದಲ್ಲಿ ಗೃಹ ಖಾತೆ ವಹಿಸಿಕೊಂಡಿರುವ ತನ್ನ ರಾಜ್ಯದವರೇ ಆದ ಚಿದಂಬರಂ ಮುಖಾಂತರ ಕೇಂದ್ರದ ಸರಕಾರದ ಮೇಲೆ ಒತ್ತಡ ತರುವ ಹುನ್ನಾರದಲ್ಲಿ ಕರುಣಾನಿಧಿ ನಿಮಗ್ನರಾಗಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಾರಾಯಣ ಗೌಡರು, ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡಿಸಲು ಹೊರಟಿರುವ ಕರುಣಾನಿಧಿ ಮೊದಲು ಕನ್ನಡಿಗರು ಮತ್ತು ಇಲ್ಲಿನ ಸರಕಾರದೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಲಿ. ವಿನಾ ಕಾರಣ ಜಗಳಕ್ಕೆ ಬಂದರೆ ಸುಮ್ಮನಿರುವ ಜಾಯಮಾನದವರಲ್ಲ ನಾವು. ಮೊದಲು ಹೊಗೇನಕಲ್ ಸಮಸ್ಯೆ ಬಗೆಹರಿಸಿ, ಆಮೇಲೆ ನಿಮ್ಮ
ರಾಜ್ಯದಲ್ಲಿ ನಮ್ಮ ಮಹಾನ್ ಕವಿ ಸರ್ವಜ್ಞ ಅವರ ಪ್ರತಿಮೆ ಅನಾವರಣಗೊಳಿಸಿ ಆನಂತರವೇ ಇಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಗೊಳಿಸಲು ಅವಕಾಶ ನೀಡುವೆವು. ಇದರ ಮಧ್ಯೆ ಏನಾದರೂ ಕನ್ನಡಿಗರ ಜೊತೆ ತಕರಾರಿಗೆ ಬಂದರೆ ಮುಂದೆ ಆಗುವ ಅನಾಹುತಕ್ಕೆ ನೀವೇ ಹೊಣೆ ಎಂದು ಎಚ್ಚರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications