28 ಸಿಎಂ ಸಭೆಗೆ ಯಡಿಯೂರಪ್ಪ ಆಗ್ರಹ
ಬೆಂಗಳೂರು, ಡಿ.1 : ಭಯೋತ್ಪಾದನೆ ಹತ್ತಿಕ್ಕುವ ನಿಟ್ಟಿನಲ್ಲಿ ದೇಶದ 28 ರಾಜ್ಯಗಳ ಮುಖ್ಯಮಂತ್ರಿ ಸಭೆ ಕರೆದು ಸಮಗ್ರ ಚರ್ಚೆ ನಡೆಸಬೇಕು ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಒತ್ತಾಯಿಸಿದರು.
ನಗರದ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳದಿದ್ದಲ್ಲಿ ದೇಶಕ್ಕೆ ಮತ್ತೆ ಇಂತಹ ಅಪಾಯ ತಪ್ಪಿದ್ದಲ್ಲ ಎಂದರು. ಮನಮೋಹನ್ ಸಿಂಗ್ ಶೀಘ್ರದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿ ಸಭೆ ಕರೆದು ಆಯಾ ರಾಜ್ಯ ಬೇಕಿರುವ ಅಗತ್ಯ ಭದ್ರತಾ ಸೌಲಭ್ಯಕ್ಕೆ ಕೂಡಲೇ ಸ್ಪಂದಿಸಬೇಕು ಎಂದು ಆಗ್ರಹಿಸಿದ ಯಡಿಯೂರಪ್ಪ, ಉಗ್ರರು ದೇಶದ ಆರ್ಥಿಕ ವ್ಯವಸ್ಥೆ ಹಾಳು ಮಾಡಿ, ಪ್ರಗತಿ ಕುಂಠಿತಗೊಳಿಸುವ ಉದ್ದೇಶದಿಂದಲೇ ಈ ಕೃತ್ಯ ಎಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಸಂಜೆ ನಡೆಯಲಿರುವ ಸರ್ವ ಪಕ್ಷಗಳ ಸಭೆ ಪ್ರತಿಪಕ್ಷಗಳ ಮುಖಂಡರ ಸಲಹೆ ಸೂಚನೆಗಳನ್ನು ಪಡೆದು ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು. ಇತ್ತೀಚೆಗೆ ಐಟಿ ಬಿಟಿ ಮುಖ್ಯಸ್ಥರೊಂದಿಗೆ ನಡೆಸಿದ ಮಾತುಕತೆಯಲ್ಲಿ ತಮ್ಮ ತಮ್ಮ ಕಂಪನಿಗಳಿಗೆ ಖಾಸಗಿ ಭದ್ರತೆಯನ್ನು ನಿಯೋಜಿಸಿಕೊಳ್ಳಬೇಕು ಎನ್ನುವ ಮುಖ್ಯಮಂತ್ರಿಯವರ ಹೇಳಿಕೆಗೆ ಐಟಿಬಿಟಿ ಮುಖ್ಯಸ್ಥರು ಸ್ಪಷ್ಟವಾಗಿ ನಿರಾಕರಿಸಿದ್ದರು.
ರಾಜ್ಯದ ಜವಾಬ್ದಾರಿ ಸರ್ಕಾರದ್ದು, ಆದ್ದರಿಂದ ನಗರದ ಪ್ರಮುಖ ಕಟ್ಟಡಗಳಿಗೆ ಹಾಗೂ ಕಂಪನಿಗಳಿಗೆ ಸರ್ಕಾರ ಸೂಕ್ತ ಭದ್ರತೆಯನ್ನು ಒದಗಿಸಬೇಕು. ಹಾಗೂ ಶಸ್ತ್ರಾಸ್ತ್ರಗಳನ್ನು ಹೊಂದಲು ಸರ್ಕಾರ ನಮಗೆ ಅನುಮತಿ ನೀಡಬೇಕು, ಜತೆಗೆ ಕಂಪನಿಯ ಮುಂದೆ ಸೇನಾ ಪಡೆಯ ಗಸ್ತು ನಿಯೋಜಿಸಬೇಕು ಎಂದು ಒತ್ತಾಯಿಸಿದ್ದರು. ಈ ಎಲ್ಲ ವಿಷಯಗಳನ್ನು ಇಂದು ನಡೆಯುವ ಸರ್ವ ಪಕ್ಷಗಳ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications