ಭಯೋತ್ಪಾದನೆ ಹತ್ತಿಕ್ಕಲು ರಾಜ್ಯಕ್ಕೆ ಬೆಂಬಲ: ಕಾಂಗ್ರೆಸ್
ಬೆಂಗಳೂರು, ಡಿ. 1 : ಭಯೋತ್ಪಾದನೆ ಹತ್ತಿಕ್ಕುವುದರ ಜತೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತರುವುದಕ್ಕೆ ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ಕೆಪಿಸಿಸಿ ಸಂಪೂರ್ಣ ಸಹಕಾರ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಸ್ಪಷ್ಟಪಡಿಸಿದರು. ಸಂಸತ್ ದಾಳಿ ಪ್ರಕರಣದ ಪ್ರಮುಖ ಅಪರಾಧಿ ಅಪ್ಜಲ್ ಗುರುಗೆ ನ್ಯಾಯಾಲಯದ ಆದೇಶದ ಪ್ರಕಾರ ಶೀಘ್ರ ಶಿಕ್ಷೆ ನೀಡುವಂತೆ ಅವರು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದರು.
ರಾಜ್ಯ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ಆಹ್ವಾನ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ನಡೆಸಿದ ಪೂರ್ವಬಾವಿ ಸಭೆಯ ನಂತರ ಮಾತನಾಡಿದರು. ಭಯೋತ್ಪಾದನೆಯಿಂದ ದೇಶದಲ್ಲಿ ಅಶಾಂತಿ ಮನೆಮಾಡಿದೆ. ಜನರು ಭಯಭೀತಿಯಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಭಯೋತ್ಪಾದನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಳ್ಳುವ ಎಲ್ಲ ಕ್ರಮಗಳಿಗೆ ಕಾಂಗ್ರೆಸ್ ಪಕ್ಷದಿಂದ ಸಂಪೂರ್ಣ ಸಹಕಾರ ನೀಡುವ ತೀರ್ಮಾನಕ್ಕೆ ಬರಲಾಗಿದೆ ಎಂದು ದೇಶಪಾಂಡೆ ಸ್ಪಷ್ಟಪಡಿಸಿದರು.
ಬೆಂಗಳೂರು ದೇಶದಲ್ಲಿ ಪ್ರತಿಷ್ಠಿತ ನಗರವಾಗಿದೆ. ದೇಶ ವಿದೇಶದ ಅನೇಕ ಕಂಪನಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಕಂಪನಿಗಳಿಗೆ ಸೂಕ್ತ ಭದ್ರತೆ ನೀಡುವುದು ಸರ್ಕಾರದ ಕೆಲಸ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ (ಎನ್ಎಸ್ ಜಿ) ಘಟಕವನ್ನು ಸ್ಥಾಪಿಸಬೇಕು ಎಂದು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಮುಂಬೈ ದಾಳಿಯ ನಂತರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಎಲ್ಲ ರಾಜ್ಯಗಳಲ್ಲಿ ಎನ್ ಎಸ್ ಜಿ ಘಟಕಗಳಲ್ಲಿ ತೆರೆಯುವ ಕುರಿತು ಮಾತನಾಡಿದ್ದರು. ದೇಶದಲ್ಲಿ ಈಗಾಗಲೇ ನಾಲ್ಕು ಕಡೆ ಎನ್ ಎಸ್ ಜಿ ಘಟಕಗಳಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಎನ್ ಎಸ್ ಜಿ ಘಟಕ ಸ್ಫಾಪಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದರು.
ಅಫ್ಜಲ್ ಗುರುನನ್ನು ಗಲ್ಲಿಗೇರಿಸಿ
ಸಂಸತ್ ದಾಳಿ ಪ್ರಕರಣದ ಪ್ರಮುಖ ಅಪರಾಧಿ ಅಪ್ಜಲ್ ಗುರುಗೆ ನ್ಯಾಯಾಲಯದ ಆದೇಶದಂತೆ ಶೀಘ್ರದಲ್ಲಿ ಶಿಕ್ಷೆ ನೀಡುವಂತೆ ದೇಶಪಾಂಡೆ ಪ್ರಧಾನಮಂತ್ರಿಯವರನ್ನು ಒತ್ತಾಯಿಸಿದರು. ಭಯೋತ್ಪಾದನೆ ಹತ್ತಿಕ್ಕುವಲ್ಲಿ ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ದೇಶದ್ರೋಹ ಕೆಲ ಮಾಡಿದ ವ್ಯಕ್ತಿಗಳಿಗೆ ತಕ್ಕೆ ಶಿಕ್ಷೆ ಆಗಲೆಬೇಕು ಎಂದು ಅವರು ಅಭಿಪ್ರಾಯಪಟ್ಟರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications