ನಾರಿಮನ್ ಹೌಸ್ ನಲ್ಲಿ ನಿಷ್ಕರ್ಷ
ಮುಂಬೈ, ನ. 28 : ಭಯೋತ್ಪಾದನೆಯ ಬೆಂಕಿಯಲ್ಲಿ ಬೇಯುತ್ತಿರುವ ಮುಂಬೈ ಮೇಲೆ ಉಗ್ರರ ಭಯಾನಕ ದಾಳಿಯಿಂದ ಉಂಟಾಗಿರುವ ಅಲ್ಲೋಲಕಲ್ಲೋಲ ಪರಿಸ್ಥಿತಿ 39 ಗಂಟೆಗಳು ಕಳೆದರೂ ಇನ್ನೂ ಮುಂದುವರೆದಿದೆ. ಟ್ರೈಡೆಂಟ್ ಒಬೆರಾಯ್ ಹೋಟೆಲ್ ಮತ್ತು ನಾರಿಮನ್ ಹೌಸ್ ನಲ್ಲಿ ಒತ್ತೆಯಾಳಾಗಿರುವವರನ್ನು ಉಳಿಸುವ ಕಾರ್ಯಾಚರಣೆ ಅವ್ಯಾಹತವಾಗಿ ನಡೆಯುತ್ತಿದೆ. ಹೆಲಿಕ್ಯಾಪ್ಟರ್ ಮೂಲಕ ಎನ್ ಎಸ್ ಜಿ ಪಡೆ ನಾರಿಮನ್ ಹೌಸ್ ನ್ನು ಸುತ್ತುವರೆದಿದ್ದು, ಉಗ್ರರೊಂದಿಗೆ ಗುಂಡಿನ ಚಕಮಕಿ ಅಬ್ಬರಿಸುತ್ತಿದೆ.
ನಾರಿಮನ್ ಹೊಸ್ ಕಟ್ಟಡದಲ್ಲಿ ನಡೆಯುತ್ತಿರುವ ಭೀಕರ ನಾಟಕವನ್ನು ಟಿವಿ ಚಾನಲ್ಲುಗಳಲ್ಲಿ ನೋಡುತ್ತಿದ್ದರೆ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ನಿಷ್ಕರ್ಷ ಚಿತ್ರ ನೆನಪಾಗುತ್ತದೆ. ಚಿತ್ರದಲ್ಲು ಕೂಡ ಇದೇ ಮಾದರಿಯಲ್ಲಿ ಬಿ ಸಿ ಪಾಟೀಲ್ ನೇತೃತ್ವದ ಉಗ್ರರ ಪಡೆ ಬ್ಯಾಂಕ್ ನೌಕರರನ್ನು ಒತ್ತಾಯಾಳಾಗಿ ಇಟ್ಟುಕೊಂಡು ಭೀತಿ ಮೆರೆದಿದ್ದರು. ವಿಷ್ಣುವರ್ಧನ್,ಅನಂತನಾಗ್, ಬಿ.ಸಿ.ಪಾಟಿಲ್, ರಮೇಶ್ ಭಟ್,ಅಂಜನ, ಅವಿನಾಶ್, ಪ್ರಕಾಶ್ ರೈ, ಸುಮನ್ ನಗರಕರ್ ನೆನಪಾಗುತ್ತಿದ್ದಾರೆ.
ಈ ಮಧ್ಯೆ ಮುಂಬೈನ ನಾರಿಮನ್ ಹೌಸ್ ಹಾಗೂ ಒಬೆರಾಯ್ ಹೋಟೆಲ್ ಮೇಲೂ ಕಳೆದ ರಾತ್ರಿಯಿಂದ ತೀವ್ರ ನಿಗಾ ವಹಿಸಲಾಗಿದೆ. ಈ ಎರಡೂ ಕಟ್ಟಡಗಳಲ್ಲಿ 100ಕ್ಕೂ ಹೆಚ್ಚು ಜನರು ಉಗ್ರರ ಸೆರೆಯಲ್ಲಿದ್ದಾರೆ. ವಿದೇಶಿ ಪ್ರಜೆಗಳು ಸೇರಿದಂತೆ ನೂರಾರು ಜನರು ಹೋಟೆಲ್ ಗಳ ಕೊಠಡಿಗಳಲ್ಲಿ ಬಂಧಿಯಾಗಿದ್ದಾರೆ. ಗುರುವಾರ ತಾಜ್ ಹೋಟೆಲ್ ನಡೆದ ಕಾರ್ಯಾಚರಣೆ ಮುಗಿದಿದ್ದು, ಪಾಕ್ ಪ್ರಜೆ ಸೇರಿದಂತೆ ಎಂಟು ಮಂದಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ.
ಒಬೇರಾಯ್ ಹೊಟೆಲ್ ನ ಎಂಟನೇ ಮಹಡಿಯಲ್ಲಿ ಅವಿತಿರುವ ಉಗ್ರರು ಗುಂಡು ಮತ್ತು ಗ್ರೆನೇಡ್ ದಾಳಿಯನ್ನು ಮುಂದುವರೆಸಿದ್ದಾರೆ. ಗುರುವಾರ ಹಗಲು ಮತ್ತು ರಾತ್ರಿಯಿಡೀ ಗುಂಡಿನ ಕಾಳಗ ನಡೆದಿದೆ. ಸೇನೆ, ನೌಕಾಪಡೆ, ಎನ್ಎಸ್ ಜಿ ಒಂದು ಕ್ಷಿಪ್ರ ಕಾರ್ಯಾಚರಣೆ ಪಡೆಗಳು ಮಹಾರಾಷ್ಟ್ರ ಪೊಲೀಸ್ ಸಹಕಾರದೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ಮುಂದುವೆರದಿದೆ. ಮುಂಬೈನ ಆಯಕಟ್ಟಿನ ಜಾಗಗಳಲ್ಲಿ ಸುಮಾರು 1000 ಕ್ಕೊ ಹೆಚ್ಚು ಯೋಧರನ್ನು ನಿಯೋಜಿಸಲಾಗಿದೆ.
ಇದುವರೆಗೂ ಮೃತಪಟ್ಟವರು ಸಂಖ್ಯೆ 140 ಕ್ಕೆ ಏರಿದೆ. 300 ಕ್ಕೊ ಹೆಚ್ಚು ಗಾಯಗೊಂಡಿದ್ದಾರೆ. ಸತ್ತವರಲ್ಲಿ ಜಪಾನ್, ಬ್ರಿಟನ್, ಆಸ್ಟ್ರೇಲಿಯಾ, ಅಮೆರಿಕ ಹಾಗೂ ಇಟಲಿಯ ಪ್ರಜೆಗಳು ಸೇರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications