ಗ್ರಾಮಗಳ ಸ್ವಾವಲಂಬನೆ ಅಗತ್ಯ :ಶೋಭಾ
ಶಿವಮೊಗ್ಗ ,ಅ. 27: ಗ್ರಾಮಗಳನ್ನು ಸ್ವಾವಲಂಬನೆ ಹಾದಿಯಲ್ಲಿ ಅಭಿವೃದ್ಧಿಗೊಳಿಸಬೇಕೆಂಬ ಚಿಂತನೆ ಯಲ್ಲಿ ಅಸ್ತಿತ್ವಕ್ಕೆ ತಂದಿರುವ ವಿಕೇಂದ್ರೀಕರಣದ ಬಲವರ್ಧನೆಗೆ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆಗಳು ಅಗತ್ಯವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅವರು ಅಭಿಪ್ರಾಯಪಟ್ಟರು.
ಅವರು ತೀರ್ಥಹಳ್ಳಿ ತುಂಗಾ ಕಾಲೇಜಿನಲ್ಲಿ ಆಯೋಜಿಸಿದ್ದ ಅಧಿಕಾರ ವಿಕೇಂದ್ರೀಕರಣ ಮತ್ತು ಗ್ರಾಮ ಪಂಚಾಯಿತಿ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬ್ರಿಟೀಷರ ಆಡಳಿತದ ಮಾದರಿಯಿಂದಾಗಿ ಗ್ರಾಮಗಳು ಸ್ವಾವಲಂಬನೆಯಿಂದ ದೂರಾಗುತ್ತಿವೆಯಲ್ಲದೆ, ಎಲ್ಲವನ್ನು ಸರ್ಕಾರವೆ ಮಾಡಲಿ ಎಂಬ ಧೋರಣೆಯನ್ನು ಬೆಳಸಿಕೊಂಡಿವೆ. ವ್ಯಕ್ತಿಯೊಬ್ಬರಿಂದ ಅಥವಾ ಸರ್ಕಾರದಿಂದ ಮಾತ್ರವೆ ಬದಲಾವಣೆಯಲ್ಲಿ ಕ್ರಾಂತಿ ಮಾಡಲಾಗದು. ಚುನಾಯಿತ ಪ್ರತಿನಿಧಿಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಜನ ಸಮುದಾಯ ಒಕ್ಕೊರಲಿನಿಂದ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು.
ಸರ್ಕಾರದಿಂದ ಬಹಳಷ್ಟು ಹಣ ಬರುತ್ತಿದ್ದರೂ ಅಭಿವೃದ್ಧಿ ಏಕೆ ಆಗುತ್ತಿಲ್ಲವೆಂದು ಪ್ರಶ್ನಿಸಿದ ಸಚಿವರು ರಾಜಕಾರಣಿ ಗಳ ಬಗ್ಗೆ ಜನರು ವಿಶ್ವಾಸ ಕಳೆದುಕೊಳ್ಳುವ ಮೊದಲು ಎಚ್ಚೆತ್ತುಕೊಂಡು ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂದರು. ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾಗುವ ಅನುದಾನ ಪೋಲಾಗುವುದನ್ನು ತಪ್ಪಿಸುವ ಉದ್ದೇಶದಿಂದ ತುಂಡುಗುತ್ತಿಗೆಗೆ ಕಡಿವಾಣ ಹಾಕಿ 10 ಲಕ್ಷ ರೂ ಮೇಲ್ಪಟ್ಟಂತೆ ಕಾಮಗಾರಿಗಳನ್ನು ಕೈಗೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಗ್ರಾಮ ಸಮಿತಿಗಳ ರಚನೆ: ಕಾಮಗಾರಿಗಳ ಮಾಹಿತಿ, ನಿಜವಾದ ಫಲಾನುಭವಿಗಳ ಆಯ್ಕೆ, ಸರ್ಕಾರದಿಂದ ಬರುವ ಅನುದಾನದ ವಿವರ ಇತ್ಯಾದಿಗಳು ಗ್ರಾಮದ ಪ್ರತಿಯೊಬ್ಬ ಪ್ರಜೆಗೂ ಗೊತ್ತಾಗಬೇಕೆಂಬ ಸದುದ್ದೇಶದಿಂದ ಪ್ರತಿ ಗ್ರಾಮ ಕ್ಕೊಂದು ಗ್ರಾಮ ಸಮಿತಿಗಳನ್ನು ರಚಿಸಲಾಗುವುದೆಂದು ಹೇಳಿದರು. ಪ್ರತಿ ವರ್ಷ ಸರ್ಕಾರದಿಂದ ಯೋಜನೆಗಳು ರೂಪಗೊಳ್ಳುತ್ತವೆ. ಅನುದಾನ ಹರಿದುಬರುತ್ತಿದೆ. ಆದರೆ ಗ್ರಾಮೀಣ ಜನರಿಗೆ ಕನಿಷ್ಟ ಮೂಲಭೂತ ಸೌಲಭ್ಯಗಳಲ್ಲೊಂದಾದ ಶೌಚಾಲಯ ನಿರ್ಮಾಣ ಮಾಡಿಕೊಡಲಾಗಿಲ್ಲವೆಂದು ವಿಷಾದಿ ಸಿದರಲ್ಲದೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕೆಂದು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದ ಸಚಿವೆ ಶೋಭಾ ಕರಂದ್ಲಾಜೆ ಅವರು, ವ್ಯವಸ್ಥೆಯ ವಿರುದ್ಧ ಜನ ಬಂಡೇಳುವ ಮೊದಲು ಬದಲಾವಣೆ ತರುವತ್ತ ಎಲ್ಲರು ಚಿಂತಿಸಬೇಕೆಂದರು.
ನಜೀರ್ ಸಾಬ್, ದೇವರಾಜ್ ಅರಸ್ ಮಾದರಿ ಯೋಜನೆಗೆ ಕರೆ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕಿಮ್ಮನೆ ರತ್ನಾಕರ್ ಅವರು ಮಾತನಾಡಿ, ಸಾಧನೆ ಮಾಡಲು ಬಹಳಷ್ಟು ಜನಬೇಕೆಂಬ ಕಲ್ಪನೆ ಬಿಟ್ಟು, ನಜೀರ್ಸಾಬ್ ಹಾಗೂ ದೇವರಾಜ್ಅರಸ್ ಅವರುಗಳಂತೆ ಸಾಧಕರಾಗಬೇಕೆಂದು ಹೇಳಿದರಲ್ಲದೆ, ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸಬೇಕು. ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಸಭೆಗಳಿಗೆ ಹೆಚ್ಚಿನ ಅಧಿಕಾರ ಕೊಡಬೇಕೆಂದು ಧ್ವನಿಗೂಡಿಸಿದರು. ರಾಜ್ಯದಲ್ಲಿ ಖಾಲಿಯಿರುವ 1.30ಲಕ್ಷ ಖಾಲಿಹುದ್ದೆಗಳನ್ನು ಭರ್ತಿಮಾಡಿ ಉತ್ತಮ ಆಡಳಿತಕ್ಕೆ ಅವಕಾಶ ಕಲ್ಪಿಸಬೇಕೆಂದರು.
ಮಾಜಿ ಶಾಸಕ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಗ್ರಾಮೀಣ ಭಾಗಗಳು ಸೊರಗುತ್ತಿವೆ. ಇವುಗಳ ತಡೆಗೆ ಹಳ್ಳಿ ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು. ಜನರು ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಠಿಸ ಬೇಕೆಂದರಲ್ಲದೆ, ಜಾಗೃತ ಜನಸಮುದಾಯವಿಲ್ಲದಿದ್ದರೆ, ಭ್ರಷ್ಟಾಚಾರ ನಿವಾರಣೆ ಅಸಾಧ್ಯವೆಂದರು.
ಆಶಯ ಭಾಷಣ ಮಾಡಿದ ಸಮಾಜ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎ.ರಾಮೇಗೌಡ ಅವರು, ಗ್ರಾಮೀಣ ಜನರು ಬದುಕು ಹಸನಾಗದ ಹೊರತು ದೇಶದ ಸಮಗ್ರ ಅಭಿವೃದ್ಧಿ ಅಸಾಧ್ಯವೆಂದರು. ಗ್ರಾಮೀಣ ಭಾಗದ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಟ್ಟು ಅವರಲ್ಲಿ ಚೈತನ್ಯ ತುಂಬಬೇಕು. ಜೊತೆಗೆ ಜನರ ಜವಾಬ್ದಾರಿಗಳನ್ನು ತಿಳಿಸಿಕೊಡಬೇಕು. ಅಧಿಕಾರ ಶಾಹಿ, ಹಾಗೂ ಜನಪ್ರತಿನಿಧಿಗಳು ಹೊಣೆಗಾರಿಕೆ ಅರಿತು ಕೆಲಸ ಮಾಡಿದಾಗ ಮಾತ್ರ ಬದಲಾವಣೆ ತರಲು ಸಾಧ್ಯವೆಂದು ಹೇಳಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಭಾರತಿಶೆಟ್ಟಿ, ತುಂಗಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೌಲಾನಿಧರ್ಮಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕುಸುಮ ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಶೃತಿ ವೆಂಕಟೇಶ್, ಅಶೋಕ್ಮೂರ್ತಿ, ಕುಸುಮಾ ಮುಂತಾದವರು ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಎಸ್.ಟಿ.ನಾಯ್ಡು ಸ್ವಾಗತಿಸಿದರು. ಪ್ರೊ.ಚಂದ್ರಶೇಖರ್ ವಂದಿಸಿದರು.
ಹೆಣ್ಣು ಭ್ರೂಣ ಹತ್ಯೆ ತಡೆಗೆ ಚಳವಳಿ: ಶೋಭಾ












Click it and Unblock the Notifications