ಲಾಟರಿ ಉದ್ಯಮಕ್ಕೆ ಹೊರಳಿದ ಒಡೆಯರ್
ಬೆಂಗಳೂರು, ಅ.23: ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಥಾಯ್ಲೆಂಡ್ ನ ಲಾಟರಿ ಉದ್ಯಮಕ್ಕೆ ಕೈಹಾಕಿದ್ದು ಅಂತಾರಾಷ್ಟ್ರೀಯ ಲಕ್ಕಿ ಲಾಟರಿ ವ್ಯವಹಾರದಲ್ಲಿ ತೊಡಗಿಕೊಳ್ಳಲಿದ್ದಾರೆ. ಥಾಯ್ಲೆಂಡ್ ಸರಕಾರದದೊಂದಿಗಿನ ಲಾಟರಿ ಒಪ್ಪಂದಕ್ಕೆ ನವೆಂಬರ್ 3ರಂದು ಒಡೆಯರ್ ಸಹಿ ಹಾಕಲಿದ್ದಾರೆ.
ಕರ್ನಾಟಕದಲ್ಲಿ ಎಂಎಸ್ ಐಎಲ್ ಮೂಲಕ ನಡೆಸಲಾಗುತ್ತಿದ್ದ ಲಾಟರಿ ಮಾರಾಟವನ್ನು ನಿಷೇಧಿಸಲಾಗಿದೆ. ನಮ್ಮ ರಾಜ್ಯದ ಮಾದರಿಯಲ್ಲೇ ಥಾಯ್ಲೆಂಡ್ ನ ಬಿಐಜಿ ಇಂಟರ್ ನ್ಯಾಷನಲ್ ಎಂಬ ಸಂಸ್ಥೆ ಲಾಟರಿ ವ್ಯವಹಾರ ನಡೆಸುತ್ತಿದೆ. ಈ ಬಗ್ಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡೆ ಒಡೆಯರ್ ಅಲ್ಲಿನ ಲಾಟರಿ ಉದ್ಯಮಕ್ಕೆ ಧುಮುಕಿದ್ದಾರೆ. ಒಡೆಯರ್ ರ ಪತ್ನಿ ಪ್ರಮೋದಾ ದೇವಿ, ಥಾಯ್ಲೆಂಡ್ ಮುಖ್ಯ ಸಚೇತಕ ಸಂಪತ್ ಕುಮಾರ್, ರಜನಿ ಚಂದ್ರಶೇಖರ್ ಸಮ್ಮುಖದಲ್ಲಿ ಒಪ್ಪಂದವನ್ನು ಕುದುರಿಸಲಾಗಿದೆ. ಅ.29ರಂದು ಒಡೆಯರ್ ಥಾಯ್ಲೆಂಡಿಗೆ ತೆರಳಲಿದ್ದಾರೆ. ನ.3ರಂದು ಒಡಂಬಡಿಕೆಗೆ ಸಹಿಹಾಕಲಿದ್ದಾರೆ.
ಥಾಯ್ಲೆಂಡ್ ಲಾಟರಿ ಒಡಂಬಡಿಕೆಯಿಂದ ಒಡೆಯರ್ ಅವರಿಗೆ ತಿಂಗಳಿಗೆ 500 ಕೋಟಿ ರು. ಆದಾಯ ಹರಿದುಬರಲಿದೆಯಂತೆ. ಒಡೆಯರ ಲಾಟರಿ ವ್ಯವಹಾರಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಸಹ ಅನುಮತಿ ನೀಡಿದೆ ಎಂದು ಗೊತ್ತಾಗಿದೆ. ಥಾಯ್ಲೆಂಡಿನಲ್ಲಿ ಎ,ಬಿ,ಸಿ ಕೋಟಾದಡಿ ಲಾಟರಿ ಮಾರಾಟ ಪ್ರಕ್ರಿಯೆ ನಡೆಯುತ್ತಿದೆ. ಒಡೆಯರ್ ಅವರಿಗೆ ಸಿ ಕೋಟಾದಡಿ ವ್ಯವಹಾರ ಮಾಡಲು ಅವಕಾಶ ನೀಡಲಾಗಿದೆ. ಎರಡು ವರ್ಷಗಳ ಕಾಲಾವಧಿಯ ಈ ಒಡಂಬಡಿಕೆ ಮುಗಿದ ನಂತರ ಥಾಯ್ಲೆಂಡ್ ಸರ್ಕಾರ ಬಿ ಕೋಟಾದಡಿ ವ್ಯವಹಾರ ಮಾಡಲು ಅನುಮತಿ ನೀಡಲಿದೆ.
(ದಟ್ಸ್ ಕನ್ನಡ ವಾರ್ತೆ)