ನಿವೃತ್ತಿ ಬಗ್ಗೆ ಚಿಂತಿಸಿಲ್ಲ ಎಂದ ಅನಿಲ್ ಕುಂಬ್ಳೆ
ಬೆಂಗಳೂರು, ಅ. 8 : ಬೆಂಗಳೂರಿನಲ್ಲಿ ಆಡುತ್ತಿರುವ ಟೆಸ್ಟ್ ನನ್ನ ಕೊನೆಯ ಪಂದ್ಯ. ಆದರೆ ನಿವೃತ್ತಿ ಬಗ್ಗೆ ಚಿಂತಿಸಿಲ್ಲ, ಇನ್ನೂ ಎರಡು ವರ್ಷಗಳ ಕಾಲ ಆಡುವ ಇಂಗಿತ ವ್ಯಕ್ತಪಡಿಸುವ ಮೂಲಕ ಅನಿಲ್ ಕುಂಬ್ಳೆ ತಮ್ಮ ನಿವೃತ್ತಿ ಬಗ್ಗೆ ಎದ್ದಿರುವ ಗಾಳಿ ಸುದ್ದಿಗೆ ತೆರೆ ಎಳೆದರು.
ಆಸ್ಟ್ರೇಲಿಯಾ ಸರಣಿ ನಂತರ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳುವುದಾಗಿ ಸೌರವ್ ಗಂಗೂಲಿ ಘೋಷಿಸಿರುವ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ನ ಜಂಬೂ ಎಂದೇ ಖ್ಯಾತಿಯಾಗಿರುವ ಟೆಸ್ಟ್ ತಂಡದ ನಾಯಕ ಅನಿಲ್ ಕುಂಬ್ಳೆ ಆಸ್ಟ್ರೇಲಿಯಾ ಸರಣಿ ಮುಗಿಸಿ ವಿದಾಯ ಹೇಳಲಿದ್ದಾರೆ ಎನ್ನುವ ಉಹಾಪೋಹಗಳು ಹರಡಿತ್ತು.
ಬಿಸಿಸಿಐ ಮೂಲಗಳಿಂದ ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಇಂಥದೊಂದು ಸುದ್ದಿ ದಟ್ಟವಾಗಿತ್ತು. ಕಿರಿಯ ಅಟಗಾರ ಸ್ಥಾನ ಕಲ್ಪಿಸುವ ನಿಟ್ಟಿನಲ್ಲಿ ಹಿರಿಯ ಅಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿಬೇಕೆಂದು ಬಿಸಿಸಿಐ ಒತ್ತಡ ಹೇರುತ್ತಿರುವುದರಿಂದ ಅನಿಲ್ ಕುಂಬ್ಳೆ ಆಸ್ಟ್ರೇಲಿಯಾ ಸರಣಿ ನಂತರ ನಿವೃತ್ತಿಯಾಗುವ ಸಾದ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಇವರ ಹಿಂದೆಯೇ ಮಾಜಿ ನಾಯಕ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಅವರು ಕೂಡಅಂತಾರಾಷ್ಚ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರೆ ಅಚ್ಚರಿ ಪಡಬೇಕಾಗಿಲ್ಲ.
ಪ್ರಸ್ತುತ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿರುವ 38ರ ಹರೆಯದ ಕುಂಬ್ಳೆ ಉತ್ತಮ ನಾಯಕ ಎಂದು ನಿರೂಪಿಸಿದ್ದಾರೆ. 1989 ರಲ್ಲಿ ಏಕದಿನ ಹಾಗೂ 1990ರಲ್ಲಿ ಟೆಸ್ಟ್ ಕ್ರಿಕೆಟ್ ಪಾದಾರ್ಪಣೆ ಮಾಡಿದ ಕುಂಬ್ಳೆ ಸತತ 18 ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ನ ತಂಡದಲ್ಲಿ ಸೇವೆ ಸಲ್ಲಿಸಿದ್ದಾರೆ. ಪಾಕಿಸ್ತಾನದ ವಿರುದ್ಧ ಇನ್ನಿಂಗ್ಸ್ ವೊಂದರಲ್ಲಿ 10 ವಿಕೆಟ್ ಗಳನ್ನು ಉರುಳಿಸಿ ದಾಖಲೆಯ ಜಯಗಳಿಸಿರುವುದು ಇವರ ಕ್ರಿಕೆಟ್ ಜೀವನದ ಶ್ರೇಷ್ಠ ಸಾಧನೆಯಾಗಿದೆ.
ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಎಂಬ ಹಿರಿಮೆಗೆ ಪಾತ್ರರಾಗಿರುವ ಅನಿಲ್ ಕುಂಬ್ಳೆ, ಆಸ್ಟ್ರೇಲಿಯಾದ ಶೇನ್ ವಾರ್ನ್, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ನಂತರದ ಸ್ಥಾನದಲ್ಲಿ ತಮ್ಮ ಹೆಸರನ್ನು ಬರೆಸಿಕೊಂಡಿರುವುದು ಅವರ ಪ್ರತಿಭೆ ಸಾಕ್ಷಿಯಾಗಿದೆ.
ಭಾರತೀಯ ಟೆಸ್ಟ್ ತಂಡದಲ್ಲಿರುವ ಹಿರಿಯ ಆಟಗಾರರನ್ನು ಗೌರವದಿಂದ ನಡೆಸಿಕೊಳ್ಳುವುದಾಗಿ ಬಿಸಿಸಿಐ ಹೇಳಿತ್ತು. ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ರಂತಹ ಮಹಾನ್ ಕ್ರಿಕೆಟ್ ಕಲಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ಅಂತಾರಾಷ್ಟ್ರೀಯ
ಕ್ರಿಕೆಟ್
ಗಂಗೂಲಿ
ವಿದಾಯ