ಮೋದಿಗೆ ಒಲಿದ ಟಾಟಾ ನ್ಯಾನೋ ಘಟಕ
ಅಹಮದಾಬಾದ್, ಅ. 7 : ಕರ್ನಾಟಕದ ಆಸೆಗೆ ತಣ್ಣೀರೆರಚುವ ಸುದ್ದಿಯೊಂದು ಗುಜರಾತಿನಿಂದ ಬಂದಿದೆ. ಬಹುನಿರೀಕ್ಷಿತ ಟಾಟಾ ನ್ಯಾನೋ ಕಂಪನಿಯ ಘಟಕ ಅಹಮದಾಬಾದ್ ನಲ್ಲಿ ಸ್ಥಾಪಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇಂದು ಗುಜರಾತಿ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಟಾಟಾ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ ಮಾತುಕತೆ ನಡೆಸುತ್ತಿರುವುದು ಭಾರಿ ಮಹತ್ವ ಪಡೆದುಕೊಂಡಿದೆ. ಸಂಜೆ ಈ ಇಬ್ಬರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತ ಮಾಹಿತಿ ನೀಡಲಿದ್ದಾರೆ.
ಅಹಮದಾಬಾದ್ ನಗರದಿಂದ 25 ಕಿಮಿ ದೂರದಲ್ಲಿರುವ ಸನಂದಾ ಪ್ರದೇಶದಲ್ಲಿ 1400 ಎಕರೆ ಭೂಮಿಯನ್ನು ನೀಡಲು ಸರ್ಕಾರ ಮುಂದೆ ಬಂದಿದೆ. ಟಾಟಾ ಕಂಪನಿಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ನ್ಯಾನೋ ಕಂಪನಿ ಸ್ಥಾಪಿಸಲು ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ. ಆನಂದ್ ಕೃಷಿ ವಿಶ್ವವಿದ್ಯಾಲಯದ ಭೂ ಪ್ರದೇಶ ಸುಮಾರು 2,200 ಎಕರೆಯಷ್ಟಿದೆ . ಇದರಲ್ಲಿ ನ್ಯಾನೋ ಯೋಜನೆಯ ಪ್ರಸ್ತಾವಿತ ಸನಂದಾ ಪ್ರದೇಶ ಸೇರಿದೆ.
ಅಗತ್ಯ ಮೂಲಭೂತ ಸೌಲಭ್ಯಗಳ ಒದಗಿಸುವುದರ ಜೊತೆಗೆ ತೆರಿಗೆ ವಿಷಯದಲ್ಲಿ ಮೋದಿ ಸರ್ಕಾರ ಭಾರಿ ರಿಯಾಯಿತಿ ನೀಡಿದೆ. ರಾಷ್ಟ್ರೀಯ ಹೆದ್ದಾರಿ, ವಿಮಾನಿಲ್ದಾಣ ಮತ್ತಿತರ ಅಗತ್ಯ ಸೇವೆಗಳ ಮಟ್ಟವನ್ನು ಉತ್ತಮಗೊಳಿಸುವ ಭರವಸೆಯನ್ನು ನೀಡಿದೆ.
ನ್ಯಾನೋ ಕಾರು ಘಟಕ ಸಿಂಗೂರಿನಿಂದ ಹೊರನಡೆದಿರುವ ಹಿನ್ನೆಲೆಯಲ್ಲಿ ದೇಶದ ಸುಮಾರು ಎಂಟು ರಾಜ್ಯಗಳಲ್ಲಿ ಟಾಟಾ ಕಂಪನಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಸ್ಥಾಪಿಸುವುದಾದರೆ 1000 ಎಕರೆ ಭೂಮಿ ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು. ಕೊನೆಯದಾಗಿ ನ್ಯಾನೋ ಕಂಪನಿಯನ್ನು ಗುಜರಾತಿನಲ್ಲಿ ಸ್ಥಾಪಿಸಲು ರತನ್ ಒಲವು ತೋರಿದ್ದಾರೆ. ಮುಖ್ಯಮಂತ್ರಿ ನರೇಂದ್ರ ಮೋದಿ ಟಾಟಾ ಕಂಪನಿಗೆ ಆಗಮನಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
ಪೂರಕ
ಓದಿಗೆ:
ಧಾರವಾಡದಲ್ಲಿ
ಸ್ಥಳ
ಪರಿಶೀಲನೆ
ನಡೆಸಿದ
ಟಾಟಾ
ಸಿಂಗೂರಿಗೆ
ಅಧಿಕೃತವಾಗಿ
'ಟಾಟಾ'
ಹೇಳಿದ
ಟಾಟಾ
ನ್ಯಾನೋ
ಘಟಕಕ್ಕೆ
ರತ್ನಗಂಬಳಿಯ
ಆಹ್ವಾನ
ಧಾರವಾಡಕ್ಕೆ
ಟಾಟಾ
ಮಾರ್ಕೋಪೊಲೋ
ಬಸ್