'ಬೆಳಗಾವಿಯಿಂದ ಗೋಕಾಕವನ್ನು ಬೇರ್ಪಡಿಸಿ'
ಗೋಕಾಕ್, ಅ. 6 : ಯಾದಗಿರಿ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ ನಂತರ ಬೆಳಗಾವಿಯನ್ನು ವಿಭಜನೆ ಮಾಡುವುದಾಗಿ ಸರ್ಕಾರ ಹೇಳಿಕೆ ನೀಡಿರುವ ಬೆನ್ನಲ್ಲೇ ಗೋಕಾಕ್ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಗೋಕಾಕ್ ಜಿಲ್ಲಾ ಹೋರಾಟ ಸಮಿತಿ ಇಂದು ಗೋಕಾಕ್ ಬಂದ್ ಗೆ ನೀಡಿರುವ ಬಂದ್ ಕರೆಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಗೋಕಾಕ್ ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸಾರ್ವಜನಿಕರು ಅಂಗಡಿ ಮುಂಗಟ್ಟು ಬಂದ್ ಮಾಡಿ ಬಂದ್ ಗೆ ಸ್ವಯಂ ಘೋಷಿತ ಬೆಂಬಲ ವ್ಯಕ್ತಪಡಿಸಿದ್ದಾರೆ. ಶಾಲಾ ಕಾಲೇಜುಗಳು, ಕೋರ್ಟ್ ಕಲಾಪಗಳು ಸ್ಥಗಿತಗೊಂಡಿವೆ. ನಗರದ ಪ್ರಮುಖ ಬೀದಿಗಳಲ್ಲಿ ಗೋಕಾಕ್ ಜಿಲ್ಲಾ ಹೋರಾಟ ಸಮಿತಿಯ ಕಾರ್ಯಕರ್ತರು ಶಾಂತಿಯುತ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದಾರೆ. ಪಕ್ಷಾತೀತವಾಗಿ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ಜರುಗಿದ ವರದಿಯಾಗಿಲ್ಲ.
ಕಳೆದ ತಿಂಗಳ ಗುಲ್ಬರ್ಗಾದಲ್ಲಿ ಸಚಿವ ಸಂಪುಟ ಸಭೆಯ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಅಂದು ಯಾದಗಿರಿ ಜಿಲ್ಲೆಯನ್ನಾಗಿ ಘೋಷಿಸುವುದರ ಜೊತೆಗೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದರು. ಆಗ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಇಂಗಿತ ವ್ಯಕ್ತಪಡಿಸಿದ್ದರು. ಈ ಹೇಳಿಕೆಯಿಂದ ತೀವ್ರಗೊಂಡಿರುವ ಗೋಕಾಕ್ ಜಿಲ್ಲಾ ರಚನೆ ಕಸರತ್ತು ತೆರೆ ಮರೆಯಲ್ಲಿ ಭಾರಿ ಪ್ರಯತ್ನ ನಡೆಸಿದೆ. ಗೋಕಾಕ್ ಪಟ್ಟಣವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಗೋಕಾಕ್ ಜಿಲ್ಲಾ ಹೋರಾಟ ಸಮಿತಿ ಸರ್ಕಾರದ ಗಮನ ಸೆಳೆಯಲು ಇಂದು ಗೋಕಾಕ್ ಬಂದ್ ನೀಡಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯನ್ನಾಗಿ ರಚನೆ ಮಾಡಿದ್ದರು.
(ದಟ್ಸ್ ಕನ್ನಡ ವಾರ್ತೆ)