ಹಳ್ಳಿಗರೊಡನೆ ಮಣ್ಣುಹೊತ್ತ ರಾಹುಲ್ ಗಾಂಧಿ
ಕೋಟಾ, (ರಾಜಸ್ಥಾನ) ಅ. 3 : ದೇಶದ ಭಾವಿ ಪ್ರಧಾನಮಂತ್ರಿ ಎಂದೇ ಬಿಂಬತರಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮಹಾತ್ಮಾ ಗಾಂಧಿ ಜಯಂತಿ ಅಂಗವಾಗಿ ಮಣ್ಣು ಕಲ್ಲು ಹೊರುವ ಮೂಲಕ ಅಕ್ಷರಶಃ ಮಣ್ಣಿನ ಮಗನಾದರು. ರಾಜಸ್ಥಾನದ ಕೋಟಾ ಎಂಬ ಹಳ್ಳಿಯಲ್ಲಿ ಕೂಲಿಗಳೊಂದಿಗೆ ಶ್ರಮದಾನ ಮಾಡುವ ಮೂಲಕ ಗಾಂಧಿ ಕನಸನ್ನು ಸಕಾರಗೊಳಿಸಲು ಮುನ್ನುಡಿ ಹಾಕಿದರು.
ನಾಳಿನ ಪ್ರಧಾನಿ ಎಂದೇ ಗರಿಮೆ ಹೊತ್ತಿರುವ ಗಾಂಧಿ ಮನೆತನದ ಕುವರ ರಾಹುಲ್ ಗಾಂಧಿ, ಸ್ಥಳೀಯ ಕೂಲಿಕಾರ್ಮಿಕರೊಂದಿಗೆ ಕಲ್ಲು ಮಣ್ಣು ಹೊತ್ತು ಶ್ರಮದಾನ ಮಾಡಿದರು. ಬಡವ ಬಲ್ಲಿದ ಎಂಬ ಬೇಧ ಬಾವ ತೊಡೆದು ಹಾಕಬೇಕೆಂದರೆ ಎಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು. ಗ್ರಾಮಗಳ ದೇಶವಾದ ಭಾರತದಲ್ಲಿ ಬಡವ, ಶ್ರೀಮಂತ ಎಂಬ ಕಂದಕ ಹಾಸು ಹೊಕ್ಕಾಗಿದೆ ಅದನ್ನು ತೊಡದು ಹಾಕಲು ಯುವ ಜನತೆ ಮುಂದಾಗಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದರು.
ಬಡವರ ಸಮಸ್ಯೆ ಅರಿಯಲು ಹಳ್ಳಿಗಳಿಗೆ ತೆರೆಳಿರುವೆ. ಸಾಧ್ಯವಾದ ಮಟ್ಟಿಗೆ ಹಳ್ಳಿಗರ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವೆ ಎಂದು ರಾಹುಲ್ ಗಾಂಧಿ ಹೇಳಿದರು. ಶ್ರಮದಾನದ ನಂತರ ಇತ್ತೀಚೆಗೆ ದುರಂತಕ್ಕೆ ಈಡಾದ ಜೋಧಪುರ್ ಚಾಮುಂಡಾ ದೇವಿಯ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಶನಿವಾರ ಚಾಮುಂಡಾ ದೇಗುಲದಲ್ಲಿ ಜರುಗಿದ ಕಾಲ್ತುಳಿತದಲ್ಲಿ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. 100 ಹೆಚ್ಚು ಜನ ಗಾಯಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications