ಆಗಂತುಕರ ಗುಂಡಿಗೆ ದೆಹಲಿ ಪತ್ರಕರ್ತೆ ಬಲಿ
ನವದೆಹಲಿ, ಅ. 1 : ಕಚೇರಿಯಿಂದ ಮನೆಗೆ ತೆರಳುತ್ತಿದ್ದ ಖಾಸಗಿ ಸುದ್ದಿ ಚಾನೆಲ್ ನ ಕಾರ್ಯಕ್ರಮ ನಿರ್ಮಾಪಕಿಯನ್ನು ನೈರುತ್ಯ ದೆಹಲಿಯ ಪೋಶ್ ಪ್ರದೇಶದ ನೆಲ್ಸನ್ ಮಂಡೇಲಾ ರಸ್ತೆಯಲ್ಲಿ ಮಂಗಳವಾರ ಬೆಳಗಿನ ಜಾವ ಗುಂಡಿಟ್ಟಿ ಹತ್ಯೆ ಮಾಡಲಾಗಿದೆ. ಹತ್ಯೆಯ ಕಾರಣ ಇನ್ನೂ ತಿಳಿದು ಬಂದಿಲ್ಲ.
'ಹೆಡ್ ಲೈನ್ ಟುಡೆ' ಸುದ್ದಿ ಚಾನೆಲ್ ನ ನಿರ್ಮಾಪಕಿಯಾಗಿದ್ದ ಪತ್ರಕರ್ತೆಸೌಮ್ಯ ವಿಶ್ವನಾಥನ್(27) ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿರುವ ಯುವತಿ. ವಸಂತ್ ಕುಂಜ್ ಬಡಾವಣೆಯ ನೆಲ್ಸನ್ ಮಂಡೇಲಾ ರಸ್ತೆಯಲ್ಲಿ ಮಂಗಳವಾರ ಬೆಳಗಿನ ಜಾವ 3.30ರ ಸುಮಾರಿಗೆ ಘಟನೆ ಜರುಗಿದೆ. ಮೃತದೇಹ ಆಕೆಯ ಕಾರಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳ ಮೂಲದ ಸೌಮ್ಯ ತಲೆಗೆ ಒಂದು ಗುಂಡು ಹೊಕ್ಕಿದ್ದು, ಇನ್ನೊಂದು ಗುಂಡು ಅವರ ಕಾರಿನ ಟೈರ್ ಗೆ ಬಡಿದಿದೆ. ಸಂಜೆ ಮನೆಗೆ ಸೇರಬೇಕಿದ್ದ ಅವರು ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಉಳಿಯಬೇಕಾಯಿತು. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ದುರ್ಮರಣ ಅಪ್ಪುವುದಕ್ಕೂ ಐದು ನಿಮಿಷ ಮುನ್ನ ಸೌಮ್ಯ ತನ್ನ ಕುಟುಂಬದವರೊಡನೆ ಸಂಭಾಷಣೆ ನಡೆಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)