ಮೇಲಧಿಕಾರಿಗಳ ಕಿರುಕುಳ : ಯುವತಿ ನೇಣಿಗೆ ಶರಣು
ಬೆಂಗಳೂರು, ಸೆ. 27 : ಮೇಲಧಿಕಾರಿಗಳ ಕಿರುಕುಳ ತಾಳಲಾರದೆ ನೋಕಿಯಾ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಯುವತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೈಸೂರು ಮೂಲದ 24ರ ಹರೆಯದ ಸೋನಿ ಎಂಬ ಯುವತಿ ಆತ್ಮಹತ್ಯೆಗೆ ಶರಣಾಗುವ ಮುನ್ನ ವಿವರವಾದ ಮರಣ ಪತ್ರ ಬರೆದಿಟ್ಟಿದ್ದಾಳೆ. ಪತ್ರದಲ್ಲಿ ಕಿರುಕುಳ ನೀಡಿದ ಇಬ್ಬರು ಮೇಲಧಿಕಾರಿಗಳ ಹೆಸರನ್ನು ಬರೆದಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾಳೆ. ಅದಲ್ಲದೆ, 'ಕಾರ್ಯನಿರತ ಮಹಿಳೆಯರ ಪರವಾಗಿ ಯಾರಾದರೂ ಹೋರಾಟ ಮಾಡಬೇಕು' ಎಂದು ದೊಡ್ಡ ಅಕ್ಷರಗಳಲ್ಲಿ ಅತ್ಯಂತ ಸ್ಪಷ್ಟವಾಗಿ ಬರೆಯಲಾಗಿದೆ.
ಘಟನೆಯ ವಿವರ : ಸೋನಿ ಕಳೆದ ಒಂದು ತಿಂಗಳಿಂದ ತನ್ನ ಮೇಲೆ ಮೇಲಿಂದ ಮೇಲೆ ಆಗುತ್ತಿದ್ದ ದೌರ್ಜನ್ಯದ ಬಗ್ಗೆ ಪಾಲಕರಿಗೆ ಮತ್ತು ಸ್ನೇಹಿತರಿಗೆ ತಿಳಿಸಿದ್ದಳು. ಈ ಕುರಿತಾಗಿ ನೋಕಿಯಾ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿಯ ಗಮನಕ್ಕೂ ತಂದಿದ್ದಳು. ಆದರೆ, ಎರಡು ಮೂರು ದಿನಗಳಿಂದ ಪಾಲಕರ ಕರೆ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಗಾಬರಿಗೊಂಡ ಆಕೆಯ ಪಾಲಕರು ಸ್ನೇಹಿತರಿಗೆ ತಿಳಿಸಿದ್ದಾರೆ. ಸ್ನೇಹಿತರು ಜಯನಗರ 9ನೇ ಬ್ಲಾಕ್ ನಲ್ಲಿ ಸೋನಿ ವಾಸವಿದ್ದ ಮನೆಯಗೆ ಧಾವಿಸಿದಾಗ ನೇಣು ಹಾಕಿಕೊಂಡಿದ್ದು ತಿಳಿದುಬಂದಿದೆ.
ತಿಲಕ್ ನಗರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ಆಕೆಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಿದ್ದಾರೆ. ಎರಡು ದಿನಗಳ ಹಿಂದೆಯೇ ಸೋನಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.
ಈ ಘಟನೆ ಸಾಫ್ಟ್ ವೇರ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯ ಮೇಲೆ ಆಗುವ ದೌರ್ಜನ್ಯಗಳ ಕರಾಳ ಮುಖವನ್ನು ತೆರೆದಿಟ್ಟಿದೆ. ಮಹಿಳೆಯರ ಪರವಾದ ಸೂಕ್ತ ಕಾನೂನು ಇಲ್ಲದಿರುವುದು ಮತ್ತು ಕಠಿಣ ಕ್ರಮ ಕೈಗೊಳ್ಳದಿರುವುದು ಇಂಥ ಘಟನೆಗಳು ಮರುಕಳಿಸುವಂತೆ ಮಾಡಿವೆ. ಎರಡು ದಿನಗಳ ಹಿಂದೆ ರಾಜ್ಯ ಉಚ್ಚ ನ್ಯಾಯಾಲಯ ಕೂಡ ಬಾರ್ ಗಳಲ್ಲಿ ಮಹಿಳೆಯರು ಮುಕ್ತವಾಗಿ ಮದಿರೆಯನ್ನು ಸಂತರ್ಪಣೆ ಮಾಡಬಹುದೆಂದು ತೀರ್ಪಿತ್ತಿದೆ. ಬೆಂಗಳೂರಿನ ಬಿಪಿಓ ಕಂಪನಿಗಳಲ್ಲಂತೂ ಮಹಿಳೆಯರೇ ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಮಹಿಳೆಯರಿಗೆ ರಾತ್ರಿ ಪಾಳಿ ನಿಷೇಧಿಸಬೇಕೆಂಬ ಕೂಗೂ ಎದ್ದಿದೆ.
(ದಟ್ಸ್ ಕನ್ನಡ ವಾರ್ತೆ)