ಆಯ್ಕೆ ಮಂಡಳಿ ಚುಕ್ಕಾಣಿ ಹಿಡಿದ ಶ್ರೀಕಾಂತ್
ಮುಂಬಯಿ, ಸೆ. 27: ಭಾರತ ಕ್ರಿಕೆಟ್ ನ ಮಾಜಿ ನಾಯಕ ಹಾಗೂ ಚನ್ನೈ ಸೂಪರ್ ಕಿಂಗ್ಸ್ ಬೆಂಬಲಿಗ ಕ್ರಿಸ್ ಶ್ರೀಕಾಂತ್ ಅವರನ್ನು ಭಾರತೀಯ ಕ್ರಿಕೆಟ್ ಆಯ್ಕೆ ಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ದಿಲೀಪ್ ವೆಂಗ್ ಸರ್ಕಾರ್ ಅವರ ಸ್ಥಾನಕ್ಕೆ ಶ್ರೀಕಾಂತ್ ಆಯ್ಕೆಯಾಗಿದ್ದಾರೆ ಎಂದು ಬಿಸಿಸಿಐ ನ ಕಾರ್ಯದರ್ಶಿ ನಿರಂಜನ್ ಶಾ ಸುದ್ದಿಗಾರರಿಗೆ ತಿಳಿಸಿದರು.
ಇಲ್ಲಿನ ಇಂದು ಹಾಗೂ ನಾಳೆ ನಡೆಯಲಿರುವ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆ ನಂತರ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎನ್ನಲಾಗಿದೆ. ಆಯ್ಕೆ ಮಂಡಳಿಯ ಇತರ ಸದಸ್ಯರನ್ನೂ ಕೂಡ ಹೆಸರಿಸಲಾಗಿದೆ. ಸುರೇಂದರ್ ಭಾವೆ(ಪಶ್ಚಿಮ ವಲಯ), ರಾಜ ವೆಂಕಟ್(ಪೂರ್ವ ವಲಯ),ಯಶಪಾಲ್ ಶರ್ಮ(ಉತ್ತರ ವಲಯ) ಹಾಗೂ ನರೇಂದ್ರ ಹಿರ್ವಾನಿ(ಕೇಂದ್ರ ವಲಯ). ಆಯ್ಕೆದಾರರಿಗೆ ವಾರ್ಷಿಕವಾಗಿ 25 ಲಕ್ಷ ರೂ ಗೌರವ ಧನ ನೀಡಲಾಗುವುದು ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ಅಕ್ಟೋಬರ್ 1 ರಿಂದ ಹೊಸ ಆಯ್ಕೆ ಮಂಡಳಿ ಅಧಿಕಾರ ವಹಿಸಿಕೊಳ್ಳಲಿದೆ. ವೆಂಕಟಪತಿ ರಾಜು, ಸಂಜಯ ಜಗದಾಳೆ, ರಂಜಿಬ್ ಬಿಸ್ಮಾಲ್, ಭೂಪಿಂದರ್ ಸಿಂಗ್ ಹಾಗೂ ವೆಂಗ್ ಸರ್ಕಾರ ಅವರನ್ನೊಳಗೊಂಡಿದ್ದ ಆಯ್ಕೆಮಂಡಳಿ ತನ್ನ ಅಧಿಕಾರ ಅವಧಿ ಪೂರ್ಣಗೊಳಿಸಿ ನಿರ್ಗಮಿಸಿದೆ.
ಬಿಸಿಸಿಐ ಹೊಸ ಪದಾಧಿಕಾರಿಗಳು ಇವರು:
ಶಶಾಂಕ್ ಮನೋಹರ್- ಬಿಸಿಸಿಐ ಅಧ್ಯಕ್ಷ
ಎನ್. ಶ್ರೀನಿವಾಸನ್ - ಕಾರ್ಯದರ್ಶಿ
ಸಂಜಯ್ ಜಗದಾಳೆ- ಜಂಟಿ ಕಾರ್ಯದರ್ಶಿ
ಎಂ.ಪಿ. ಪಾಂಡವ್- ಖಂಜಾಂಚಿ
ಅರುಣ್ ಜೇಟ್ಲಿ, ಲಲಿತ್ ಮೋದಿ, ಎಸ್. ಯಾದವ್, ಅರಿಂದಂ ಗಂಗೂಲಿ ಚಿರಾಯು ಅಮೀನ್- ಉಪಾಧ್ಯಕ್ಷರು
ರಾಜ್ಯದ ಪ್ರತಿನಿಧಿಯಾಗಿ ಸಂಜಯ್ ದೇಸಾಯಿ ಅವರನ್ನು ನೇಮಿಸಲಾಗಿದೆ.
(ದಟ್ಸ್ ಕ್ರೀಡಾವಾರ್ತೆ)












Click it and Unblock the Notifications