ಸಿಮಿ ನಿಷೇಧ ಮತ್ತೆ ನಾಲ್ಕು ವಾರ ಮುಂದೂಡಿಕೆ
ನವದೆಹಲಿ, ಸೆ. 11 : ದೇಶದ್ರೋಹ ಕೆಲಸದಲ್ಲಿ ಸಕ್ರಿಯವಾಗಿರುವುದರ ಜತೆಗೆ ಅಂತಾರಾಷ್ಟ್ರೀಯ ಮಟ್ಟದ ಉಗ್ರವಾದಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವ ಸಿಮಿ ಸಂಘಟನೆಯ ಮೇಲೆ ಹೇರಲಾಗಿದ್ದ ನಿಷೇಧವನ್ನು ಸುಪ್ರಿಂಕೋರ್ಟ್ ಅಕ್ಟೋಬರ್ ಎರಡನೇ ವಾರದವರೆಗೆ ಮುಂದುವರೆಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ. 24 ರಂದು ಮುಂದಿನ ವಿಚಾರಣೆ ನಡೆಯಬೇಕಿತ್ತು, ಆದರೆ ಸಿಮಿ ವಿರುದ್ಧ ಕೇಂದ್ರ ಸರ್ಕಾರ ಮತ್ತೊಂದು ಮೊಕದ್ದಮೆ ಪಟ್ಟಿ ಸಲ್ಲಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮತ್ತೆ ನಾಲ್ಕು ವಾರಗಳ ಕಾಲ ಮುಂದೂಡಿ ಆದೇಶ ಹೊರಡಿಸಿದೆ.
ಕಳೆದ ಆ. 25 ರಂದು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಹಾಗೂ ನ್ಯಾಯಮೂರ್ತಿ ಪಿ. ಸದಾಶಿವಂ ಅವರನ್ನು ಒಳಗೊಂಡಿರುವ ನ್ಯಾಯಪೀಠ ವಿಚಾರಣೆ ನಡೆಸಿತ್ತು. ದೇಶದಲ್ಲಿ ನಡೆಯುತ್ತಿರುವ ವಿಧ್ವಂಸಕ ಕೃತ್ಯಗಳಲ್ಲಿ ಸಿಮಿ ಸಂಘಟನೆ ಪಾತ್ರ ಸಕ್ರಿಯವಾಗಿದೆ. ಉತ್ತರ ಪ್ರದೇಶ, ಮುಂಬೈ, ಕೇರಳ, ಕರ್ನಾಟಕ, ಕಾಶ್ಮೀರ, ಪಂಜಾಬ, ಹೀಗೆ ದೇಶದ ವಿವಿಧ ಭಾಗಗಳಲ್ಲಿ ನಡೆದ ಬಾಂಬ್ ಸ್ಫೋಟದ ಕೃತ್ಯದಲ್ಲಿ ಸಿಮಿ ಸಂಘಟನೆ ಕೈವಾಡವಿದೆ ಎಂದು ಕೇಂದ್ರ ಸರ್ಕಾರ 42 ಪುಟಗಳ ಸಮಗ್ರ ಮಾಹಿತಿಯುಳ್ಳ ನೂತನ ವರದಿಯನ್ನು ಸುಪ್ರಿಂಕೋರ್ಟ್ ಗೆ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ.
ಕಳೆದ ಅ.5 ರಂದು ದೆಹಲಿಯ ಹೈಕೋರ್ಟ್ ಸಿಮಿ ಸಂಘಟನೆಯ ನಿಷೇಧ ಹೇರುವಂತ ಬಲವಾದ ಸಾಕ್ಷ್ಯಧಾರಗಳನ್ನು ಒದಗಿಸುವಲ್ಲಿ ಕೇಂದ್ರ ವಿಫಲವಾಗಿದ್ದು, ಸಿಮಿ ಸಂಘಟನೆ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ನಿಷೇಧವನ್ನು ತೆರೆವುಗೊಳಿಸಿ ಆದೇಶ ನೀಡಿತ್ತು. ನ್ಯಾಯಾಮೂರ್ತಿಗಳಾದ ಗೀತಾ ಮಿತ್ತಲ್ ಈ ಆದೇಶವನ್ನು ನೀಡಿದ್ದರು. ತಕ್ಷಣ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ಸುಪ್ರಿಂಕೋರ್ಟ್ ಗೆ ಪ್ರಕರಣವನ್ನು ದಾಖಲಿಸಿತ್ತು.
(ದಟ್ಸ್ ಕನ್ನಡ ವಾರ್ತೆ)
ಸಿಮಿ ನಿಷೇಧ ಮುಂದುವರಿಕೆ : ಸುಪ್ರಿಂಕೋರ್ಟ್