ಆಲ್ಕೋಹಾಲ್ ರಹಿತ ವೈನ್ ಕುಡಿರಿ, ರೈತರ ಕಾಪಾಡಿ
ಬೆಂಗಳೂರು, ಸೆ. 11: ಮುಂದಿನ ತಿಂಗಳೊಳಗೆ ರಾಜ್ಯದೆಲ್ಲೆಡೆ ಅಲ್ಕೋಹಾಲ್ ರಹಿತ ವೈನ್ ಮಳಿಗೆಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸಿದೆ ಎಂದು ತೋಟಗಾರಿಕಾ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಸೆಪ್ಟೆಂಬರ್ ಅಂತ್ಯಕ್ಕೆ ರಾಜ್ಯ ಸರ್ಕಾರದ ನೂತನ ವೈನ್ ನೀತಿ ಜಾರಿಗೆ ಬರಲಿದೆ. ಆನಂತರ ವೈನ್ ಮಳಿಗೆ ತೆರೆಯಲು ಅವಕಾಶ ನೀಡಲಾಗುವುದು. ಆಸಕ್ತರು ಆಯಾ ಜಿಲ್ಲಾಧಿಕಾರಿಗಳ ಬಳಿ ಒಂದು ಸಾವಿರ ರುಪಾಯಿ ಶುಲ್ಕ ಪಾವತಿಸಿ ಲೈಸನ್ಸ್ ಪಡೆಯಬಹುದು. ದೇಶದಲ್ಲಿ ಅತಿಹೆಚ್ಚು ವೈನ್ ಉತ್ಪಾದನೆ ಮಾಡುವ ಮಹಾರಾಷ್ಟ್ರ ರಾಜ್ಯದ ಉದ್ಯಮಿಗಳನ್ನು ಸೆಳೆಯಲು ಲೈಸನ್ಸ್ ಬೆಲೆಯನ್ನ್ನು ತಗ್ಗಿಸಲಾಗಿದೆ. ಸದ್ಯ ಅಲ್ಕೋ ಇರುವ ವೈನ್ ಎಲ್ಲೆಡೆ ಮಾರಾಟವಾಗುತ್ತಿದೆ. ಆದರೆ, ರಾಜ್ಯದ ದ್ರಾಕ್ಷಿ ಬೆಳೆಗಾರರ ಹಿತದೃಷ್ಟಿ ಹಾಗೂ ಜನತೆಯ ಆರೋಗ್ಯದ ಬಗೆಗಿನ ಕಾಳಜಿಯಿಂದ ಆಲ್ಕೋಹಲ್ ರಹಿತ ವೈನ್ ಶಾಪ್ ತೆರೆಯಲು ಅನುಮತಿ ನೀಡುತ್ತಿರುವುದಾಗಿ ಸಚಿವ ಕತ್ತಿ ಹೇಳಿದರು.
ಆರಂಭದಲ್ಲಿ ಈ ವೈನ್ ಮಳಿಗೆಗಳು ಅಬಕಾರಿ ಇಲಾಖೆ ಅಡಿಯಲ್ಲೇ ಕಾರ್ಯನಿರ್ವಹಿಸಲಿದೆ. ಆಲ್ಕೋಹಾಲ್ ರಹಿತ ವೈನ್ ಮಾರಾಟ ಮಾಡುವುದರಿಂದ ಮುಂದಿನ ದಿನಗಳಲ್ಲಿ ತೋಟಗಾರಿಕಾ ಇಲಾಖೆ ವ್ಯಾಪ್ತಿಗೆ ಸೇರಿಸಲಾಗುವುದು. ಈ ಬಗ್ಗೆ ನೂತನ ವೈನ್ ನೀತಿಯಲ್ಲಿ ಸ್ಪಷ್ಟವಾಗಿ ನಿಯಮಾವಳಿಯನ್ನು ರೂಪಿಸಲಾಗಿದೆ ಎಂದು ಕತ್ತಿ ತಿಳಿಸಿದರು.
ವೈನ್ ಪಾರ್ಕ್ ಸ್ಥಾಪನೆ: ಚಿಕ್ಕಬಳ್ಳಾಪುರ ಹಾಗೂ ಬಿಜಾಪುರದಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಬೆಂಬಲ ನೀಡುವ ಉದ್ದೇಶದಿಂದ ವೈನ್ ಪಾರ್ಕ್ ಗಳನ್ನು ತೆರೆಯಲಾಗುತ್ತದೆ. ಇದು ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆಯಾಗಲಿದೆ. ದ್ರಾಕ್ಷಿ ಬೆಳೆಯಲಾಗುವ ಬೆಂಗಳೂರು ಗ್ರಾಮಾಂತರ, ನಗರ ಜಿಲ್ಲೆ ಹಾಗೂ ಕೋಲಾರ ಜಿಲ್ಲೆಗಳನ್ನು ' ನಂದಿ ವ್ಯಾಲಿ' ಎಂದು ಹಾಗೂ ಬಾಗಲಕೋಟೆ, ಬಿಜಾಪುರ ಮತ್ತು ಬೆಳಗಾವಿ ಜಿಲ್ಲೆಗಳನ್ನು 'ಕೃಷ್ಣ ವ್ಯಾಲಿ' ಎಂದು ಹೆಸರಿಸಲಾಗಿದೆ. ಈ ವ್ಯಾಲಿಗಳ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಚಿವ ಕತ್ತಿ ಹೇಳಿದರು.
ರಾಜ್ಯದಲ್ಲಿ ಸುಮಾರು 9,700 ಹೆಕ್ಟೇರು ಭೂ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ವಾರ್ಷಿಕ ಇಳುವರಿ ಸುಮಾರು 1.67 ಟನ್ ನಷ್ಟಿದೆ. ಮೇಲಿನ ಎರಡು ವ್ಯಾಲಿಗಳಲ್ಲದೆ ರಾಜ್ಯದಲ್ಲಿ ಕೊಪ್ಪಳ, ಚಿಕ್ಕಮಗಳೂರು ಹಾಗೂ ಮೈಸೂರು ಜಿಲ್ಲೆಗಳಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಮುಂಬಯಿ ಹಾಗೂ ದೆಹಲಿ ನಂತರಅತಿ ದೊಡ್ಡ ವೈನ್ ಮಾರುಕಟ್ಟೆಯನ್ನು ಬೆಂಗಳೂರು ಹೊಂದಿದೆ.
(ದಟ್ಸ್ ಕನ್ನಡವಾರ್ತೆ)