'ವಿಜಯ ಸಂಕಲ್ಪ' ಅಭಿಯಾನಕ್ಕೆ ಬಿಜೆಪಿ ಚಾಲನೆ
ಬೆಂಗಳೂರು, ಸೆ. 11 : ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಭೆ ಭಾರಿ ಮಹತ್ವ ಪಡೆದುಕೊಂಡಿದ್ದು, ಮುಂಬರುವ ಆರು ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಎದುರಿಸುವ ರಣತಂತ್ರ ರೂಪಿಸಲಾಗುವುದು. ಈ ಹಿನ್ನೆಲೆಯಲ್ಲಿ ಸೆ. 13 ರಂದು ವಿಜಯ ಸಂಕೇತವಾಗಿ 'ವಿಜಯ ಸಂಕಲ್ಪ' ಯಾತ್ರೆಯನ್ನು ಆರಂಭಿಸಲು ಸಿದ್ಧತೆ ನಡೆಸಿದೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಅಬ್ಬಾಸ್ ಅಲಿ ನಕ್ವಿ, ಶುಕ್ರವಾರ ಆರಂಭವಾಗಲಿರುವ 'ವಿಜಯ ಸಂಕಲ್ಪ' ಯಾತ್ರೆಯಲ್ಲಿ ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ ಎಂದರು. ಬಸವನ ಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ 'ವಿಜಯ ಸಂಕಲ್ಪ' ಯಾತ್ರೆ ಮೂಲಕ ವಿಜಯ ಆಭಿಯಾನವನ್ನು ಆರಂಭಿಸಲಾಗುವುದು ಎಂದರು.
ಮೂರು ದಿನಗಳ ಕಾರ್ಯಕಾರಿಣಿಯಲ್ಲಿ ಏಳು ಪ್ರಮುಖ ಸಭೆಗಳು ನಡೆಯಲಿದ್ದು, ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಆಹಾರ ಧಾನ್ಯಗಳ ಕೊರತೆ, ಭಯೋತ್ಪಾದನೆ, ಅಣು ಒಪ್ಪಂದ ಮೊದಲಾದ ಸಮಸ್ಯೆಗಳ ಮಧ್ಯೆ ಸಿಲುಕಿ ಕೇಂದ್ರದ ಯುಪಿಎ ನಲುಗಿದೆ. ಈ ಎಲ್ಲ ವಿಷಯಗಳನ್ನು ಪ್ರಮುಖವಾಗಿ ಇಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸುವ ಸಂಬಂಧ ಕಾರ್ಯಕಾರಿಣಿಯಲ್ಲಿ ನಿರ್ಣಯ ತೆಗೆದುಕೊಳ್ಳುಲಾಗುವುದು. ಲೋಕಸಭೆಗೆ ಯಾವ ಕ್ಷಣದಲ್ಲಾದರೂ ಚುನಾವಣೆ ಎದುರಾಗಬಹುದು ಎನ್ನುವ ನಿರೀಕ್ಷೆಯಿಂದ ಚುನಾವಣೆ ಅಧಿಸೂಚನೆ ಹೊರಡಿಸುವ ಮೊದಲೇ ಕ್ಷೇತ್ರವಾರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ನರೇಂದ್ರ ಮೋದಿ, ವಸುಂಧರಾ ರಾಜೇ, ರಮಣ್ ಸಿಂಗ್ ಸೇರಿದಂತೆ ಬಿಜೆಪಿ ಸರ್ಕಾರ ಇರುವ ಏಳು ರಾಜ್ಯಗಳ ಮುಖ್ಯಮಂತ್ರಿಗಳು, ಮೂವರು ಉಪಮುಖ್ಯಮಂತ್ರಿಗಳು, ಎಲ್ಲ ರಾಜ್ಯಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿಗಳು, ಕಾರ್ಯಕಾರಿಣಿ ಸದಸ್ಯರು ಸೇರಿ ಒಟ್ಟು 120 ಮಂದಿ ಆಗಮಿಸುವ ನಿರೀಕ್ಷೆ ಇದೆ. ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ನಗರದ ತುಂಬೆಲ್ಲಾ ಕೇಸರಿ ಧ್ವಜಗಳ ಅಬ್ಬರ ಹೆಚ್ಚಾಗಿದೆ.
ವುಡ್ ಲ್ಯಾಂಡ್ಸ್ ನಲ್ಲಿ ಮಾಧ್ಯಮ ಕೇಂದ್ರ
ಕಾರ್ಯಕಾರಿಣಿ ಕುರಿತು ವರದಿ ಮಾಡಲು ದೆಹಲಿ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಮುದ್ರಣ ಹಾಗೂ ಸುದ್ದಿ ವಾಹಿನಿಗಳ 120 ಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸಲಿದ್ದಾರೆ. ಎಲ್ಲರಿಗೂ ವುಡ್ ಲ್ಯಾಂಡ್ಸ್ ಹೋಟೆಲ್ ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕಾರಿಣಿಯು ಹೋಟೇಲ್ ಚಾನ್ಸರಿಯಲ್ಲಿ ನಡೆಯಲಿದೆ. ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಗಳು ನಡೆಯಲಿವೆ. ಸುದ್ದಿ ಮಾಧ್ಯಮದರಿಗೆ ಅನುಕೂಲಕ್ಕಾಗಿ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಮಾದ್ಯಮ ಕೇಂದ್ರವನ್ನು ತೆರೆಯಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications