ಸಾಕಷ್ಟು ವಿವಾದ ಸೃಷ್ಟಿಸಿದ್ದ ಅಮರನಾಥ ವಿವಾದ ಅಂತ್ಯ
ಶ್ರೀನಗರ, ಆ. 31 : ಅಮರನಾಥ ಭೂವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ನಡೆದ ಮಾತುಕತೆ ಫಲಪ್ರದವಾಗಿದೆ. ಈ ಮೂಲಕ ಕಳೆದ ಎರಡು ತಿಂಗಳಿಂದ ಹಿಂದುಪರ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆಯಿಂದ ಎದ್ದಿದ್ದ ಕೋಮುದಳ್ಳುರಿ ಕೊನೆಗೊಂಡಂತಾಗಿದೆ.
ಅಮರನಾಥ ಯಾತ್ರಾತ್ರಿಗಳ ಸಲುವಾಗಿ ಅಮರನಾಥ ಸಂಘರ್ಷ ಸಮಿತಿಗೆ ಸರ್ಕಾರ 100 ಎಕರೆ ಭೂಮಿಯನ್ನು ನೀಡಿತ್ತು. ನಂತರ ಜಮ್ಮು ಕಾಶ್ಮೀರ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಗುಲಾಮ್ ನಬಿ ಅಜಾದ್ ಸರ್ಕಾರ ಭೂಮಿಯನ್ನು ಹಿಂದಕ್ಕೆ ಪಡೆದಿತ್ತು. ಇದಕ್ಕೆ ಪ್ರತಿಭಟಿಸಿ ಪರ ವಿರೋಧ ಪ್ರತಿಭಟನೆಗಳು ಕಳೆದು ಎರಡು ತಿಂಗಳಿಂದ ಅವ್ಯಾಹತವಾಗಿ ನಡೆದಿದ್ದವು. ಗಲಭೆ ಹಿನ್ನೆಲೆಯಲ್ಲಿ ಹಿಂಸಾಚಾರ, ನಿಷೇಧಾಜ್ಞೆ, ಸಾವು ನೋವು ಗಳು ಜರುಗಿದ್ದವು.
ವಿಷಯ ಕಗ್ಗಾಂಟಾದ್ದರಿಂದ ಕೇಂದ್ರ ಸರ್ಕಾರ ರಾಜ್ಯಾಪಾಲರ ನೇತೃತ್ವದಲ್ಲಿ ಸಮಿತಿಯೂಂದನ್ನು ರಚಿಸಿತ್ತು. ಇಂದು ಬೆಳಗ್ಗೆ ಅಮರನಾಥ ದೇವಾಲಯ ಸಂಘರ್ಷ ಸಮಿತಿ ಹಾಗೂ ಸಮಿತಿ ನಡೆಸಿದ ಮಾತುಕತೆ ಸಫಲವಾಗಿದೆ. ಅಮರನಾಥ ದೇವಾಲಯಕ್ಕೆ ವರ್ಷದ ಮೂರು ತಿಂಗಳು ಕಾಲ ಸರ್ಕಾರಿ ಜಾಗವನ್ನು ನೀಡಲು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ದೇವಾಲಯದ ಸಮಿತಿ ಮೇಲ್ವಿಚಾರಕ ಲೀಲಾ ಕರಣ್ ಶರ್ಮಾ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)