ಗಣಿ ಲಂಚ ಹಗರಣ ದಾಖಲೆ ಸಲ್ಲಿಕೆಗೆ ಗಡುವು ನಿಗದಿ
ನವದೆಹಲಿ, ಆ. 29 : ಗಣಿ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಅಕ್ಟೋಬರ್ 1 ರೊಳಗೆ ಪ್ರಕರಣದ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ತಿಳಿಸಿದೆ.
150 ಕೋಟಿ ರುಪಾಯಿಗಳ ಗಣಿ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಮೂವರು ನ್ಯಾಯಾಧೀಶರನ್ನು ಒಳಗೊಂಡು ನ್ಯಾಯಪೀಠ ಇಂದು ವಿಚಾರಣೆ ನಡೆಸಿತು. ಕರ್ನಾಟಕ ಸರ್ಕಾರದ ಪರವಾಗಿ ನ್ಯಾಯಾವಾದಿ ಸಂಜಯ ಹೆಗಡೆ, ಜನಾರ್ದನ ರೆಡ್ಡಿ ಪರ ಹರೀಶ್ ಸಾಳ್ವೆ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪರ ಪಿ.ಎಚ್.ಫಾರಖ್ ಅವರು ಸುರ್ಪಿಂಕೋರ್ಟ್ ತಮ್ಮ ವಾದವನ್ನು ಮಂಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವಕೀಲರ ವಾದವನ್ನು ಆಲಿಸಿದ ನ್ಯಾಯಾಪೀಠ ಅಕ್ಟೋಬರ್ 1 ರೊಳಗೆ ಪ್ರಕರಣದ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಅದೇಶ ನೀಡಿತು. ನವೆಂಬರ್ 4 ರೊಳಗೆ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಗಳಿವೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಸಾಧ್ಯತೆಗಳಿವೆ ಎನ್ನುವುದು ನ್ಯಾಯಾವಾದಿಗಳ ಅಭಿಪ್ರಾಯವಾಗಿದೆ.
ಜನಾರ್ದನ ರೆಡ್ಡಿ ಈಗಾಗಲೇ ತಮ್ಮಲ್ಲಿರುವ ಕ್ಯಾಸೆಟ್ ಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ 40 ಕೋಟಿ ರುಪಾಯಿ ನೀಡಿರುವ ಬಗ್ಗೆ, ಹಾಗೂ ಅರಣ್ಯ ಸಚಿವ ಸಿ.ಚೆನ್ನಿಗಪ್ಪ ಅವರಿಗೆ ಗಣಿ ಮಾಲೀಕರ ಸಂಘ 103 ಕೋಟಿ ಹಣವನ್ನು ನೀಡಿರುವುದು ಹಾಗೂ ಆ ಹಣದಲ್ಲಿ 3 ಕೋಟಿ ರುಪಾಯಿಗಳನ್ನು ಕುಮಾರಸ್ವಾಮಿ ತೆಗೆದುಕೊಂಡಿರುವ ಎಲ್ಲ ವಿವರಗಳು ಇವೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣವನ್ನು ಸಿಬಿಐಗೆ ವಹಿಸುವ ಸಾಧ್ಯತೆಗಳಿವೆ. ಮೂಟ್ಟ ಮೂದಲ ಬಾರಿಗೆ ಕುಮಾರಸ್ವಾಮಿ ರಕ್ಷಣೆಗಾಗಿ ತಮ್ಮ ಪರ ವಕೀಲರನ್ನು ನೇಮಿಸಿರುವುದು ಅಧಿಕೃತವಾಗಿ ಪ್ರಕರಣದಲ್ಲಿ ನ್ಯಾಯಾಲಯದ ಮೂಲಕ ಭಾಗವಹಿಸಿದಂತಾಗಿದೆ.
(ದಟ್ಸ್ ಕನ್ನಡ ವಾರ್ತೆ)